ಮದರಸಾದ ಮೇಲೆ ಮಾತ್ರ ಏಕೆ ಕಣ್ಣು? ಇತರ ಧರ್ಮಗಳ ಸಂಸ್ಥೆಗಳನ್ನೂ ಸಮಾನವಾಗಿ ಪರಿಗಣಿಸಿದ್ದೀರಾ?: NCPCR ಗೆ ಸುಪ್ರೀಂ ಪ್ರಶ್ನೆ

Prasthutha|

‘ಧರ್ಮಬೋಧನೆ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ’

- Advertisement -

ನವದೆಹಲಿ: ನಿಮಗೆ ಮದ್ರಸಾ ಮೇಲೆ ಮಾತ್ರ ಏಕೆ ಕಣ್ಣು? ಇತರ ಧರ್ಮಗಳ ಸಂಸ್ಥೆಗಳನ್ನೂ ಸಮಾನವಾಗಿ ಪರಿಗಣಿಸಿದ್ದೀರಾ?”, ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.


ಮದ್ರಸಾ ಶಿಕ್ಷಣ ವ್ಯವಸ್ಥೆಯ ವಿರುದ್ಧ ಆಯೋಗವು ತೆಗೆದುಕೊಂಡ ನಿಲುವನ್ನು ಪ್ರಶ್ನಿಸುವ ಸಂದರ್ಭ ಸುಪ್ರೀಂ ಕೋರ್ಟ್ ಈ ಪ್ರತಿಕ್ರಿಯೆ ನೀಡಿದೆ. ಆಯೋಗವು ಇತರ ಧರ್ಮಗಳ ಸಂಸ್ಥೆಗಳ ವಿರುದ್ಧ ಅದೇ ನಿಲುವನ್ನು ತೆಗೆದುಕೊಂಡಿದೆಯೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

- Advertisement -


ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅಲಹಾಬಾದ್ ಉಚ್ಛ ನ್ಯಾಯಾಲಯದ ತೀರ್ಪಿನ ವಿರುದ್ಧದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿದ್ದಾಗ ಈ ಪ್ರಸಂಗ ನಡೆಯಿತು.

ಉತ್ತರ ಪ್ರದೇಶದ ಮದರಸಾ ಕಾಯ್ದೆ–2004 ಅಸಾಂವಿಧಾನಿಕ ಎಂದು ಹೇಳಿದ್ದ ಅಲಹಾಬಾದ್ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ, ಅಂಜುಂ ಖಾದ್ರಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.


ಕಾಯ್ದೆ ಅಸಾಂವಿಧಾನಿಕ, ಜಾತ್ಯತೀತ ತತ್ವಗಳಿಗೆ ವಿರುದ್ಧ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ, ತೀರ್ಪನ್ನು ಕಾಯ್ದಿರಿಸಿತು.


ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ‘ಹೈಕೋರ್ಟ್ ಇಡೀ ಕಾಯ್ದೆ ರದ್ದುಪಡಿಸುವ ಬದಲಿಗೆ, ಮೂಲಭೂತ ಹಕ್ಕುಗಳ ಉಲ್ಲಂಘನೆ ಎನ್ನಲಾದ ಅಂಶವನ್ನು ರದ್ದುಪಡಿಸಬಹುದಿತ್ತು’ ಎಂದರು.


ವಿಚಾರಣೆಯ ಒಂದು ಹಂತದಲ್ಲಿ, ‘ಮದರಸಾದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ಕಾಯ್ದೆಯ ಪರಿಧಿಯಿಂದ ಮದರಸಾವನ್ನು ಹೊರಗಿಡುವುದು ಎಂದರೆ, ‘ಸ್ನಾನ ಮಾಡಿಸುತ್ತಿದ್ದ ಶಿಶುವನ್ನು ಎಸೆದಂತೆ’ ಎಂದು ಪೀಠವು ಅಭಿಪ್ರಾಯಪಟ್ಟಿತು.


ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ‘ಹೈಕೋರ್ಟ್ ತೀರ್ಪಿನಿಂದಾಗಿ ಹಲವು ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ. ನೂರಾರು ಮಕ್ಕಳನ್ನು ಈಗ ಬಲವಂತವಾಗಿ ಹೊರಗೆ ಕಳುಹಿಸುವುದು ಜಾತ್ಯತೀತತೆ ಅಲ್ಲ’ ಎಂದರು. ಇದಕ್ಕೆ ಪೀಠವು ‘ಜಾತ್ಯತೀತತೆ ಎಂದರೆ ಬದುಕುವುದು, ಬದುಕಲು ಬಿಡುವುದು’ ಎಂದರು.


ಇಡೀ ಕಾಯ್ದೆಯನ್ನು ರದ್ದುಪಡಿಸುವುದು ಎಂದರೆ ಅದರರ್ಥ, ಮದರಸಾಗಳು ನಿಯಂತ್ರಣ ಇಲ್ಲದೆಯೇ ಮುಂದುವರಿಯುತ್ತವೆ ಎಂಬುದೇ ಆಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.


ಮದರಸಾಗಳು ಮುಖ್ಯವಾಹಿನಿಗೆ ಬರಲು ನೆರವಾಗುತ್ತಿಲ್ಲ ಎಂಬ ವಾದಕ್ಕೆ ಪ್ರತಿಯಾಗಿ, ಧಾರ್ಮಿಕ ಸಂಸ್ಥೆಗಳು ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಬೌದ್ಧ ಬಿಕ್ಕುಗಳಿಗೆ ತರಬೇತಿ ನೀಡುವ ಸಂಸ್ಥೆಗಳಿವೆ. ಇಸ್ಲಾಂ ಅನ್ನು ಕೇಂದ್ರೀಕರಿಸಿ ಮಾಡುತ್ತಿರುವ ವಾದವು, ಭಾರತದಲ್ಲಿ ಎಲ್ಲ ಧರ್ಮಗಳಿಗೂ ಅನ್ವಯವಾಗುತ್ತದೆ. ಅಂದರೆ ವೇದ ಪಾಠಶಾಲಾಗಳಿಂದ, ಬೌದ್ಧ ಬಿಕ್ಕುಗಳು, ಜೈನ ಅರ್ಚಕರ ತರಬೇತಿ ಸಂಸ್ಥೆಗಳಿಗೂ ಅನ್ವಯವಾಗುತ್ತವೆ ಎಂದು ಪೀಠವು ಹೇಳಿತು.



Join Whatsapp