ತಬ್ಲೀಗಿ ಜಮಾಅತ್ ವಿದೇಶೀ ಸದಸ್ಯರ ಕೇಸ್ ಒಗ್ಗೂಡಿಸುವಿಕೆ | ಬಿಹಾರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Prasthutha|

ನವದೆಹಲಿ : ತಬ್ಲೀಗಿ ಜಮಾಅತ್ ವಿದೇಶಿ ಸದಸ್ಯರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ, ಎಲ್ಲ ಪ್ರಕರಣಗಳನ್ನು ಒಗ್ಗೂಡಿಸುವ ಬಗ್ಗೆ ಸುಪ್ರೀಂ ಕೊರ್ಟ್ ಮಂಗಳವಾರ ಬಿಹಾರ ಸರಕಾರದ ಪ್ರತಿಕ್ರಿಯೆ ಕೇಳಿದೆ. ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಸೇರಿದಂತೆ ವಿವಿಧ ಕ್ರಿಮಿನಲ್ ಆರೋಪಗಳನ್ನು ಹೊರಿಸಿ 13 ಮಂದಿ ವಿದೇಶಿ ತಬ್ಲೀಗಿ ಸದಸ್ಯರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ನೋಟಿಸ್ ನೀಡಿದೆ.

- Advertisement -

ನ್ಯಾ. ಎ.ಎಂ. ಖಾನ್ವಿಲ್ಕರ್, ನ್ಯಾ. ದಿನೇಶ್ ಮಹೇಶ್ವರಿ, ನ್ಯಾ. ಸಂಜೀವ್ ಖನ್ನಾರನ್ನೊಳಗೊಂಡ ನ್ಯಾಯಪೀಠ, ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಮುಂದಿನ ವಿಚಾರಣೆ ಸೋಮವಾರಕ್ಕೆ ನಿಗದಿಯಾಗಿದೆ.

13 ಮಂದಿ ಜಮಾತ್ ಸದಸ್ಯರ ವಿರುದ್ಧದ ಪ್ರಕರಣವನ್ನು ಪಾಟ್ನಾದ ಒಂದೇ ನ್ಯಾಯಾಲಯದಲ್ಲಿ ನಡೆಸಬಹುದು ಎಂದು ಕೊರ್ಟ್ ತಿಳಿಸಿದೆ. ಇಂತಹ ಹಲವು ಪ್ರಕರಣಗಳ ವಿಚಾರಣೆ ನಡೆಯುತ್ತಿರುವುದರಿಂದ ದೆಹಲಿಯಲ್ಲೇ ಒಂದು ಕಡೆ ವಿಚಾರಣೆ ಒಟ್ಟುಗೂಡಿಸುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಹೇಳಿದ್ದಾರೆ.

- Advertisement -

ಲಭ್ಯವಿರುವ ಮಾಹಿತಿಯ ಪ್ರಕಾರ ವಿದೇಶಿ ತಬ್ಲೀಗಿ ಜಮಾಅತ್ ಸದಸ್ಯರ ವಿರುದ್ಧ 11 ರಾಜ್ಯಗಳಲ್ಲಿ 205 ಎಫ್ ಐಆರ್ ಗಳು ದಾಖಲಾಗಿವೆ. ಇಂತಹ ಸುಮಾರು 2,765 ವಿದೇಶಿಯರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಸಲ್ಲಿಸಿರುವ ಅಫಿದಾವಿತ್ ಒಂದರಲ್ಲಿ ತಿಳಿಸಲಾಗಿದೆ. ಇವರಲ್ಲಿ 2,679 ವಿದೇಶಿಯರ ವೀಸಾ ರದ್ದುಪಡಿಸಲಾಗಿದೆ. ಇನ್ನುಳಿದ 86 ಮಂದಿ ನೇಪಾಳಿಯರಾಗಿರುವುದರಿಂದ ಅವರಿಗೆ ವೀಸಾದ ಅಗತ್ಯವಿಲ್ಲ.

Join Whatsapp