ನಾಲಿಗೆ ಹರಿ ಬಿಡುವ ಮುನ್ನ ಎಚ್ಚರ: ಯತ್ನಾಳ್’ಗೆ ನೇರ ಸವಾಲು ಹಾಕಿದ ಸಚಿವ ಮುರುಗೇಶ್ ನಿರಾಣಿ

Prasthutha|

ವಿಜಯಪುರ: ನನ್ನ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಸಾವಿರ ಬಾರಿ ಯೋಚಿಸಿ ಟೀಕೆ ಮಾಡಿದರೆ ನಿಮಗೂ ಒಳಿತು.ಇನ್ನು ಮುಂದೆ ನಾಲಿಗೆ ಹರಿಬಿಟ್ಟರೆ ಅದೇ ದಾಟಿಯಲ್ಲಿ ನಾನು ಕೂಡ ಉತ್ತರ ಕೊಡುತ್ತೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್’ಗೆ ಏಕವಚನದಲ್ಲೇ ಎಚ್ಚರಿಕೆ ನೀಡಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮಿಗಳ ನಾಡಿನಲ್ಲಿ ನಾವಿದ್ದೇವೆ ಎಂಬ ಕಾರಣಕ್ಕೆ ಇದುವರೆಗೂ ನಾನು ಎಷ್ಟೇ ಟೀಕೆಗಳನ್ನು ಮಾಡಿದರು ಸಹನೆಯಿಂದ ಇದ್ದೆ. ನಮ್ಮ ಸಹನೆಯನ್ನೇ ದೌರ್ಬಲ್ಯ ಎಂದುಕೊಂಡಿದ್ದರೆ ಇನ್ನು ಮುಂದೆ ಸುಮ್ಮನಿರುವುದಿಲ್ಲ. ಪ್ರತಿ ಟೀಕೆಗೂ ಪ್ರತ್ಯುತ್ತರ ಕೊಡಲೇಬೇಕಾಗುತ್ತದೆ ಎಂದು ಅವರು ಗುಡುಗಿದರು.


2023ರ ಚುನಾವಣೆಯಲ್ಲಿ ನಾನೂ ಕೂಡ ನನ್ನ ಮತ ಕ್ಷೇತ್ರ ಬೀಳಗಿಇಂದ ಚುನಾವಣೆ ಎದುರಿಸುತ್ತನೇ. ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಚುನಾವಣೆ ವಿಜಯಪುರದಿಂದ ಎದುರಿಸಲಿ. ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ನೋಡೋಣ. ಈ ಬಾರಿ ಬಿಜಾಪುರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನಿರಾಣಿ ಭವಿಷ್ಯ ನುಡಿದರು.
ಸಿದ್ದೇಶ್ವರ ಶ್ರೀಗಳು ಹುಟ್ಟಿದ ಈ ನಾಡಿನಲ್ಲಿ ಅವರ ಪ್ರವಚನ ಕೇಳಿದ ಕಲ್ಲುಗಳು ಕೂಡ ಬದಲಾಗುತ್ತವೆ ಎಂಬ ಪ್ರತೀತಿ ಇದೆ. ಅಂತಹ ನಾಡಿನಲ್ಲಿ ಹುಟ್ಟಿದ ಇವರು ಇನ್ನು ಬದಲಾಗಿಲ್ಲ. ಎಲ್ಲರ ಬಗ್ಗೆಯೂ ಟೀಕೆ ಮಾಡಿ ನಾನು ಜಯಿಸಿಕೊಳ್ಳುತ್ತೇನೆ ಎಂಬ ಅಹಂನಲ್ಲಿದ್ದಾರೆ. ಇನ್ನು ಮುಂದೆ ಇದು ನಡೆಯುವುದಿಲ್ಲ ಎಂದು ಎಚ್ಚರಿಸಿದರು. ನನಗೂ ತಾಳ್ಮೆ, ಇತಿಮಿತಿ ಇದೆ. ಅವರು ಬದಲಾಗಬಹುದೆಂಬ ಒಂದೇ ಒಂದು ಕಾರಣಕ್ಕೆ ಎಲ್ಲವನ್ನೂ ನುಂಗಿಕೊಂಡು ಸುಮ್ಮನಿದ್ದೆ. ಆದರೆ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ.

- Advertisement -


ಬಿಜೆಪಿ ಸರ್ಕಾರ, ನಮ್ಮ ಮುಖ್ಯಮಂತ್ರಿಗಳು ಹಾಗೂ ಸ್ವಾಮೀಜಿಗಳ ಬಗ್ಗೆಯೂ ಹಗುರವಾಗಿ ಮಾತನಾಡುತ್ತಾರೆ. ನೀವು ಯಾವ ಪಕ್ಷಕ್ಕೆ ನಿಯತ್ತಾಗಿದ್ದೀರಿ. ನನಗೆ ಬಿಜೆಪಿ ತಾಯಿ ಸಮಾನ. ಪಕ್ಷದಲ್ಲಿದ್ದುಕೊಂಡು ನಮ್ಮನ್ನೇ ಟೀಕೆ ಮಾಡುತ್ತೀರಿ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಬಿ.ವೈ. ವಿಜಯೇಂದ್ರ ಎಲ್ಲರ ಬಗ್ಗೆಯೂ ಹಗುರವಾಗಿ ಮಾತನಾಡುತ್ತೀರಿ. ಇನ್ನು ಮುಂದೆ ಹಗುರವಾಗಿ ಮಾತನಾಡಿದರೆ ಅದೇ ಭಾಷೆಯಲ್ಲೇ ನಾನು ಮಾತನಾಡುತ್ತೇನೆ ಎಂದು ನಿರಾಣಿ ಅಬ್ಬರಿಸಿದರು.

ನನ್ನನ್ನು ಬಚ್ಚ ಎಂದು ಕರೆಯುವ ಯತ್ನಾಳ್ ಅವರು, ರಾಜಕೀಯಕ್ಕೆ ಬರುವ ಮುನ್ನ ನೀವು ಎಲ್ಲಿದ್ದೀರಿ? ಯಾರ ಯಾರ ಕೈ ಹಿಡಿದುಕೊಂಡು ಟಿಕೇಟ್ ಪಡೆದಿದ್ದೀರಿ, ಮಂತ್ರಿ ಸ್ಥಾನಕ್ಕಾಗಿ ಯಾರ ಕಾಲಿಗೆ ಬಿದ್ದಿದ್ದೀರಿ. ಸ್ವಾಭಿಮಾನದ ಬಗ್ಗೆ ಮಾತನಾಡುವ ನಿಮಗೆ ಮೊದಲು ಸ್ವಾಭಿಮಾನ ಇದೆಯೇ ಎಂದು ನಿರಾಣಿ ಪ್ರಶ್ನಿಸಿದರು. ನಾನು ಪಕ್ಷದ ಒಂದು ಚೌಕಟ್ಟಿನಲ್ಲಿರುವುದರಿಂದ ಸರ್ಕಾರಕ್ಕೆ ಮುಜುಗರವಾಗಬಾರದೆಂದು ಸುಮ್ಮನಿದ್ದೇನೆ. ನಿಮ್ಮ ಮಟ್ಟಕ್ಕೆ ಇಳಿದು ನಾನು ಮಾತನಾಡಿದರೆ ನನಗೂ, ನಿಮಗೂ ವ್ಯತ್ಯಾಸವಿರುವುದಿಲ್ಲ. ಸಮಾಜದಲ್ಲಿ ನನಗೆ ನನ್ನದೇ ಆದ ಸ್ಥಾನಮಾನ ಇದೆ. ನಾಲಿಗೆ ಚಾಚುವ ಮುನ್ನ ಎಚ್ಚರದಿಂದ ಮಾತನಾಡಿ ಎಂದು ನಿರಾಣಿ ಅವರು ಹೇಳಿದರು.


ನಾನು ಪರಿಶ್ರಮದಿಂದ ಮೇಲೆ ಬಂದವನು. 10 ಲಕ್ಷದಿಂದ ಕೆಲಸ ಆರಂಭಿಸಿ ಇಂದು 21 ಫ್ಯಾಕ್ಟರಿ ಕಟ್ಟಿ, 72 ಸಾವಿರ ಜನಕ್ಕೆ ಉದ್ಯೋಗ ಕೊಟ್ಟಿದ್ದೇನೆ. ಯಾರಿಗೂ ವಂಚನೆ ಮೋಸ ಮಾಡಿಲ್ಲ. ಎಲ್ಲವೂ ಕೂಡ ಪಾರದರ್ಶಕವಾಗಿಯೇ ವೈವಾಟು ನಡೆಸುತ್ತಿದ್ದೇವೆ. ನಿಮ್ಮಂತೆ ಹಾಲಿನ ಡೈರಿ ಮಾಡಿ ಷೇರುದಾರರಿಗೆ ಟೋಪಿ ಹಾಕಿಲ್ಲ. ನನ್ನ ಬಗ್ಗೆ ಮಾತನಾಡುವ ಮುನ್ನ ಉಷಾರ್ ಎಂದು ನಿರಾಣಿ ಎಚ್ಚರಿಕೆ ಕೊಟ್ಟರು.


ಅಶ್ಲೀಲ ಸೀಡಿ ಬಗ್ಗೆ ಮಾತನಾಡುವ ನೀವು ಮೊದಲು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಏಕೆ. ಅದರ ಬಗ್ಗೆ ಸಾರ್ವಜನಿಕರಿಗೆ ಉತ್ತರ ಕೊಡಿ ಎಂದು ನಿರಾಣಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶಟ್ಟಿ, ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ, ಭೀಮಾಶಂಕರ ಹದನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.



Join Whatsapp