‘ಹಿಂದೂ ಅಶ್ಲೀಲ ಪದ’ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ಸತೀಶ್ ಜಾರಕಿಹೊಳಿ

Prasthutha|

ಬೆಳಗಾವಿ: ಹಿಂದೂ ಎಂಬುದು ಅಶ್ಲೀಲ ಪದ ಎಂಬ ಹೇಳಿಕೆ ನೀಡಿ  ತೀವ್ರ ವಿರೋಧಕ್ಕೆ ಗುರಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

- Advertisement -

ತಮ್ಮ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಶಬ್ಧದ ಬಗ್ಗೆ ಮಾತನಾಡಿದ್ದೇನೆ. ಈ ಬಗ್ಗೆ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ನಾನು ಭಾಷಣದಲ್ಲಿ ಹೇಳಿದ್ದು ಹಿಂದೂ ಶಬ್ಧ ಪರ್ಷಿಯನ್ ನಿಂದ ಬಂದಿದೆ ಎಂದು . ಈ ಬಗ್ಗೆ ಚರ್ಚೆ ಆಗಬೇಕು ಎಂದೂ ನಾನು ಹೇಳಿದ್ದೇನೆ. ಕೆಲವು  ಪದಗಳು ದಾಖಲೆಯಲ್ಲಿ ಸಿಗುತ್ತೆ ಈ ಬಗ್ಗೆ ಕೋಟ್ ಮಾಡಿ‌ ಹೇಳಿದ್ದೇನೆ. ಇದು ಸತೀಶ್ ಜಾರಕಿಹೊಳಿ ವೈಯಕ್ತಿಕ ಹೇಳಿಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದಲ್ಲಿ ಚರ್ಚೆ ಹಿನ್ನೆಲೆ ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯ. ಜಾತಿ, ಧರ್ಮ ಮೀರಿ ಕೆಲಸ ಮಾಡುವ ಉದ್ದೇಶ ನನ್ನದು. ಪರ್ಷಿಯನ್ನಿಂದ ಹಿಂದೂ ಪದ ಬಂದಿರುವ ಬಗ್ಗೆ ನೂರಾರು ದಾಖಲೆ ಇವೆ. ಅನೇಕ ಪುಸ್ತಕಗಳಲ್ಲಿ ಈ ಬಗ್ಗೆ ಉಲ್ಲೇಖಗಳು ಇವೆ. ಆದರೂ ಮಾಧ್ಯಮಗಳು ಉಕ್ರೇನ್, ರಷ್ಯಾ ಯುದ್ಧ ಮಾದರಿಯಲ್ಲಿ ಇದನ್ನು ವಿಶ್ಲೇಷಣೆ ಮಾಡುತ್ತಿವೆ. ಈ ಸಮಯ ಬೇರೆ ವಿಷಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ಮಾಧ್ಯಮಗಳು ಅನೇಕ ಸುಳ್ಳುಗಳನ್ನ ವಿಜೃಂಭಣೆ ಮಾಡಿವೆ. ಹಿಂದೂ ಧರ್ಮದ ವಿಚಾರ ಬಂದಾಗ ವಿಶೇಷ ಸ್ಥಾನಮಾನ. ದಯವಿಟ್ಟು ನೈಜವಾದ ಸುದ್ದಿ ತೋರಿಸುವ ಪ್ರಯತ್ನ ಮಾಡಿ. ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ. ನನಗೆ ಯಾರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ. ಜಾತಿ, ಧರ್ಮದಿಂದ ನಾನು ದೂರ ಇರುವ ವ್ಯಕ್ತಿ. ಈ ರೀತಿ ನಾನು ಯಾವುದೋ ಅಪರಾಧ ಮಾಡಿರುವಂತೆ ಬಿಂಬಿಸಬೇಡಿ. ನನ್ನ ಭಾಷಣ ಇನ್ನೂ ಹತ್ತು ಸಲ ನೋಡಿ. ತಪ್ಪಿದ್ದರೆ ಚರ್ಚೆ ಮುಂದುವರಿಸಿ ಎಂದು ತಿಳಿಸಿದರು.

ಇದೇ ರೀತಿ ಚರ್ಚೆ ಮುಂದುವರಿದರೆ ಮಾನಹಾನಿ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾನು ಯಾವುದೇ ಧರ್ಮ, ಭಾಷೆಯನ್ನು ಅವಹೇಳನ  ಮಾಡುವ ಪ್ರಶ್ನೆಯೆ ಇಲ್ಲ. ಮೂವತ್ತು ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದೇನೆ. ವಿಕಿಪೀಡಿಯಾದಲ್ಲಿ ಇರೋದು ಹೇಳಿದ್ದೇನೆ ಎಂದು ಎಚ್ಚರಿಕೆ ನೀಡಿದರು.



Join Whatsapp