ಎರಡನೇ  ಮದುವೆಯಾಗಿ ಹನಿಮೂನ್ ಗೆ ಟಿಕೆಟ್ ಬುಕ್ ಮಾಡಿದ್ದವ ಜೈಲು ಪಾಲು

Prasthutha|

ಹಾಸನ:  ಮೊದಲನೇ ಮದುವೆಯಾಗಿರುವ ವಿಷಯ ಮುಚ್ಚಿಟ್ಟು ಎರಡನೇ ವಿವಾಹಕ್ಕೆ ಸಿದ್ಧನಾಗಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

- Advertisement -

ಬೆಂಗಳೂರಿನ ಮಧುಸೂದನ್ ಎರಡನೇ ಮದುವೆಯಾಗಲು ಬಂದು ಸಿಕ್ಕಿಬಿದ್ದ ವ್ಯಕ್ತಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈತ, ನಾಲ್ಕು ವರ್ಷಗಳ ಹಿಂದೆ ಒಬ್ಬಾಕೆಯನ್ನು ಮದುವೆಯಾಗಿದ್ದ. ಆದರೆ, ಸಂಸಾರದಲ್ಲಿ ಉಂಟಾದ ಜಗಳದಿಂದ ಇಬ್ಬರು ದೂರವಾಗಿದ್ದರು.

ಈ ಹಿನ್ನೆಲೆಯಲ್ಲಿ ಕುಟುಂಬದವರು ಈತನಿಗೆ ಎರಡನೇ ಮದುವೆ ಮಾಡಲು ನಿರ್ಧರಿಸಿದ್ದು, ತನ್ನ ಸಹೋದರಿಯರ ಸಹಾಯದಿಂದ ಹಾಸನ ಮೂಲದ ಯುವತಿಯನ್ನು ಕೈ ಹಿಡಿಯಲು ಮುಂದಾಗಿದ್ದ.

- Advertisement -

ಮಧುಸೂದನ್ ಎರಡನೇ ಮದುವೆಯಾಗುತ್ತಿರುವುದು ತಿಳಿದ ಮೊದಲ ಪತ್ನಿ, ಸಾಮಾಜಿಕ ಜಾಲತಾಣಗಳ ಮೂಲಕ ಹಾಸನದ ವಿವಿಧ ಕಲ್ಯಾಣ ಮಂಟಪಗಳ ದೂರವಾಣಿ ಸಂಖ್ಯೆ ಸಂಗ್ರಹಿಸಿ, ನನ್ನ ಪತಿ ಮೋಸದ ಮದುವೆಯಾಗುತ್ತಿದ್ದಾನೆ, ದಯಮಾಡಿ ಮದುವೆ ನಿಲ್ಲಿಸುವ ಮೂಲಕ ನನಗೆ ನ್ಯಾಯ ಕೊಡಿಸಬೇಕು ಎಂದು ಅಂಗಲಾಚಿದ್ದಾಳೆ.

ನಾಲ್ಕೈದು ಕಲ್ಯಾಣ ಮಂಟಪಗಳಿಗೆ ಕರೆ ಮಾಡಿ ಕೇಳಿದಾಗ ಹಾಸನದ ಎನ್​ಸಿಇ ಕಲ್ಯಾಣ ಮಂಟಪದಲ್ಲಿ ಈತನ ಮದುವೆ ನಡೆಯುತ್ತಿರುವುದು ಗೊತ್ತಾಗಿ, ಕಲ್ಯಾಣ ಮಂಟಪದ ಮಾಲೀಕರಿಗೆ ವಿಚಾರ ತಿಳಿಸಿದ್ದಾಳೆ.  ಕೂಡಲೇ ಕಲ್ಯಾಣ ಮಂಟಪದ ಮಾಲೀಕರು ಮದುಮಗನನ್ನು ರೂಮ್​ನಲ್ಲಿ ಕೂಡಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದಾಗ ಮಧುಸೂದನ್ ನ ಬಣ್ಣ ಬಯಲಾಗಿದೆ. ಮದುವೆಯಾದ ಮಾರನೇ ದಿನವೇ ಮಧುಸೂದನ್  ಮಾಲ್ಡಿವ್ಸ್​ಗೆ ಹೋಗಲು ಎರಡು ಟಿಕೆಟ್ ಬುಕ್ ಮಾಡಿ ಹನಿಮೂನ್ ಕನಸು ಕಂಡಿದ್ದ. ಆದರೆ ಆತನ ಕನಸೆಲ್ಲಾ ಭಗ್ನವಾಗಿದೆ.

ನಾನು 4 ವರ್ಷದ ಹಿಂದೆ ಮದುವೆಯಾಗಿದ್ದೆ. ಆದರೆ ನನ್ನೊಂದಿಗೆ ಮೊದಲ ಪತ್ನಿ ಸಂಸಾರ ನಡೆಸುತ್ತಿಲ್ಲ. ಇಬ್ಬರೂ ದೂರವಾಗಿದ್ದೇವೆ. ನಮ್ಮ ಕುಟುಂಬದ ಯೋಗ ಕ್ಷೇಮ ವಿಚಾರಿಸಲು ಯಾರೂ ಇಲ್ಲದ ಕಾರಣ ನಾನು ಎರಡನೇ ಮದುವೆಯಾಗಲು ನಿರ್ಧರಿಸಿದೆ. ಆಕೆ ವಿಚ್ಛೇದನಕ್ಕೆ ಒಪ್ಪುತ್ತಿಲ್ಲ ಮತ್ತು ನನ್ನ ಜೊತೆ ಸಂಸಾರ ಮಾಡಲು ನಿರಾಕರಿಸಿದ್ದಾಳೆ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡೆ’ ಎಂದು ಮಧುಸೂದನ್ ವಿಚಾರಣೆ  ವೇಳೆ  ಹೇಳಿದ್ದಾನೆ.



Join Whatsapp