ದೀಪಾವಳಿ ವೇಳೆ ಪಟಾಕಿ ಸಿಡಿತ: 85 ಮಂದಿ ಕಣ್ಣಿಗೆ ಹಾನಿ, ಹಲವರಿಗೆ ಸುಟ್ಟಗಾಯ

Prasthutha|

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ಪಟಾಕಿ ಸಿಡಿತದಿಂದ ನಗರದಲ್ಲಿ 85 ಗೂ ಅಧಿಕ ಮಂದಿಯ ಕಣ್ಣಿಗೆ ಹಾನಿಯಾಗಿದ್ದು, ಹಲವು ಮಂದಿಗೆ ಸುಟ್ಟ ಗಾಯಗಳಾಗಿವೆ.

- Advertisement -

ಕಣ್ಣಿಗೆ ಹಾನಿಗೊಂಡ 80 ಮಂದಿಯಲ್ಲಿ 12 ಮಂದಿಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದ್ದು, ಆರು ಮಂದಿಯ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ ಇದೆ ಎಂದು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕಳೆದ ಮೂರು ದಿನಗಳಿಂದ ನಗರದ ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ, ಶಂಕರ ಕಣ್ಣಿನ ಆಸ್ಪತ್ರೆ, ಆಸ್ಟರ್ ಸಿಎಂಐ ಆಸ್ಪತ್ರೆ, ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿಯಿಂದ ಹಾನಿಗೊಳಗಾದವರು ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಮಿಂಟೋ ಆಸ್ಪತ್ರೆಯಲ್ಲಿ ಅ.24 ರಂದು 15 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಕೆಪಿ ಅಗ್ರಹಾರದಲ್ಲಿ ನೆರೆಮನೆಯವರು ಹಚ್ಚಿದ ಪಟಾಕಿ ಸಿಡಿದು ಅರ್ಜುನ್ (21) ಎಂಬ ಯುವಕನ ಕಣ್ಣುಗಳ ಒಳಭಾಗಕ್ಕೆ ಗಾಯವಾಗಿದೆ. ಆರ್ ಟಿ ನಗರದ ವಶಿತ್ (10) ಬೇರೆಯವರು ಹಚ್ಚಿದ ಪಟಾಕಿ ಸಿಡಿದು ಮುಖ ಹಾಗೂ ಕಣ್ಣಿಗೆ ಸುಟ್ಟಗಾಯಗಳಾಗಿವೆ.

ಜೆಜೆ ನಗರದ ಕಾರ್ತಿಕ್ (11) ಪಟಾಕಿ ಸಿಡಿಸುತ್ತಿದ್ದಾಗ ಎರಡೂ ಕಣ್ಣಿಗೆ ಗಾಯವಾಗಿದೆ. ಎನ್ ಜಿಎಫ್ ಲೇಔಟ್ ನ ಸುರಭಿ ಎಂಬ 4 ವರ್ಷದ ಮಗು ಹೂ ಕುಂಡದ ಸಿಡಿತದಿಂದ, ಅನ್ನಪೂರ್ಣೇಶ್ವರಿನಗರದ ಮಮತಾ (39), ಸರ್ಜಾಪುರ ರಸ್ತೆಯ ಸಂಗೀತ ವರ್ಮಾ (49) ಎಂಬುವರಿಗೆ ಪಟಾಕಿ ಸಿಡಿತದಿಂದ ಎರಡೂ ಕಣ್ಣುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ತಿಳಿಸಿದ್ದಾರೆ.

ಚಿಕ್ಕ ಪ್ರಮಾಣದ ಹಾನಿಯಾಗಿದ್ದ 14 ಮಂದಿ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಹೆಚ್ಚಿನ ಹಾನಿಯಾಗಿದ್ದ ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಐದು ಮಂದಿಗೆ ದೃಷ್ಟಿಹಾನಿಯಾಗಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತದೆ. ಒಬ್ಬರಿಗೆ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ ಇದೆ. ಅ.23 ಮತ್ತು ಅ.24ರಂದು ಏಳು ಮಂದಿ ಚಿಕಿತ್ಸೆ ಪಡೆದಿದ್ದರು. ನಿನ್ನೆಯ ಅಂತ್ಯಕ್ಕೆ 17 ಮಂದಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದರು.

ನಾಲ್ವರ ಕಣ್ಣಿಗೆ ಹೆಚ್ಚು ಹಾನಿ:

ನಾರಾಯಣ ನೇತ್ರಾಲಯದಲ್ಲಿ ಅ.25 ರಂದು ಒಂದೇ ದಿನ 18 ಮಂದಿ ಪಟಾಕಿ ಸಿಡಿತದಿಂದ ಕಣ್ಣುಗಳಿಗೆ ಹಾನಿಮಾಡಿಕೊಂಡು ಚಿಕಿತ್ಸೆ ಪಡೆದರೆ ನಿನ್ನೆ 10 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 8 ಜನರ ಕಣ್ಣುಗಳಿಗೆ ಗಂಭೀರ ಗಾಯಗಳಾಗಿದ್ದು, ದೃಷ್ಟಿಹಾನಿಯಾಗಿ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿದೆ. ಮೂವರ ಕಣ್ಣುಗಳ ಕಾರ್ನಿಯಾ ಭಾಗಕ್ಕೆ ಸಾಕಷ್ಟು ಹಾನಿಯಾಗಿದ್ದು, ದೃಷ್ಟಿ ಮರಳುವ ಸಾಧ್ಯತೆ ಕಡಿಮೆ ಇದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ ತಿಳಿಸಿದ್ದಾರೆ.



Join Whatsapp