9 ಮಹಿಳೆಯರನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಕೊಲೆ: ಹಂತಕ ಕುಲ್ ದೀಪ್ ಬಂಧನ

Prasthutha|

ಲಖನೌ: ಉತ್ತರ ಪ್ರದೇಶ ಬರೇಲಿ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ 9 ಮಂದಿ ಮಹಿಳೆಯರನ್ನು ಹತೈಗೈದಿದ್ದಾನೆ ಎನ್ನಲಾದ ಸರಣಿ ಹಂತಕನೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

- Advertisement -


ಪ್ರತ್ಯಕ್ಷದರ್ಶಿಗಳ ವಿವರಣೆಗಳ ಆಧಾರದ ಮೇಲೆ ಪೊಲೀಸರು ಮೂವರು ಶಂಕಿತರ ರೇಖಾಚಿತ್ರವನ್ನು ಬಿಡುಗಡೆ ಮಾಡಿದ ಮೂರು ದಿನಗಳ ನಂತರ ಈ ಬಂಧನ ನಡೆದಿದೆ. ಬಂಧಿತ ಸೈಕೋ ಕಿಲ್ಲರ್ ಆರೋಪಿಯನ್ನು ಬರೇಲಿಯ ನವಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಕುಲದೀಪ್ ಎಂದು ಗುರುತಿಸಲಾಗಿದೆ.


ಬರೇಲಿಯ ವಿವಿಧ ಭಾಗಗಳಲ್ಲಿ ನಡೆದ ಮಹಿಳೆಯ ಕೊಲೆಗಳಲ್ಲಿ ಒಂದೇ ಮಾದರಿಯನ್ನು ಪೊಲೀಸರು ಗಮನಿಸಿದಾಗ ಈ ಪ್ರಕರಣವು ಮೊದಲು ಬೆಳಕಿಗೆ ಬಂದಿತು. ಕಳೆದ 13 ತಿಂಗಳುಗಳಲ್ಲಿ 40 ರಿಂದ 65 ವರ್ಷ ವಯಸ್ಸಿನ 9 ಮಹಿಳೆಯರು ಒಂದೇ ರೀತಿಯ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಶಾಹಿ, ಶೀಶ್ಗಢ್ ಮತ್ತು ಶೇರ್ಗಢ್ ಪ್ರದೇಶಗಳಲ್ಲಿ ಕೊಲೆಗಳು ನಡೆದಿವೆ. ಕೊಲೆಯಾದ ಮಹಿಳೆಯರ ಶವಗಳು ಕಬ್ಬಿನ ಗದ್ದೆಗಳಲ್ಲಿ ಕಂಡುಬಂದಿತ್ತು. ಅವರ ಬಟ್ಟೆಗಳು ಅಸ್ತವ್ಯಸ್ತ ಸ್ಥಿತಿಯಲ್ಲಿದ್ದರೂ ಲೈಂಗಿಕ ದೌರ್ಜನ್ಯದ ಯಾವುದೇ ಪುರಾವೆ ಕಂಡುಬಂದಿರಲಿಲ್ಲ. ಎಲ್ಲಾ ಪ್ರಕರಣಗಳನ್ನು ಅವಲೋಕಿಸಿದಾಗ ಮಹಿಳೆಯರು ಧರಿಸಿದ್ದ ಸೀರೆಗಳನ್ನೇ ಬಳಸಿ ಕತ್ತು ಹಿಸುಕಿದ್ದು ಎಲ್ಲಾ ಕೊಲೆಯಲ್ಲಿ ಸಾಮತ್ಯೆ ಕಂಡುಬಂದಿತ್ತು.

- Advertisement -


ಸರಣಿ ಹಂತಕನನ್ನು ಪತ್ತೆಹಚ್ಚಲು ಬರೇಲಿ ಪೊಲೀಸರು “ಆಪರೇಷನ್ ತಲಾಶ್” ಪ್ರಾರಂಭಿಸಿ, ಒಟ್ಟು 22 ವಿಶೇಷ ತಂಡಗಳನ್ನು ರಚಿಸಿದ್ದರು.ಅಲ್ಲಿ ಪೊಲೀಸರು ಸರಿಸುಮಾರು 1,500 ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಶೋಧಿಸಿದ್ದರು. 1.5 ಲಕ್ಷ ಮೊಬೈಲ್ ಸಂಖ್ಯೆ ಪರಿಶೀಲಿಸಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ 600 ಕ್ಯಾಮೆರಾಗಳನ್ನು ಸ್ಥಾಪಿಸಿದರು. ಪೊಲೀಸರನ್ನು ರೈತರು ಮತ್ತು ಸ್ಥಳೀಯರ ಸೋಗಿನಲ್ಲಿ ನಿಯೋಜಿಸಲಾಗಿತ್ತು.ಬಾಡಿಕ್ಯಾಮೆರಾಗಳು ಮತ್ತು ಗುಪ್ತ ಕಣ್ಗಾವಲು ಸಾಧನಗಳೊಂದಿಗೆ ಪರಿಸರದಲ್ಲಿ ಬೆರೆಯುತ್ತಿದ್ದರು.


ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಅನುಮಾನದಿಂದ ಕುಲದೀಪ್ ಎಂಬಾತನನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. ಈ ವೇಳೆ ತಾನು ಮಹಿಳೆಯರನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಮಹಿಳೆಯರನ್ನ ಸೆಕ್ಸ್ ಗೆ ಪೀಡಿಸುತ್ತಿದ್ದ ಸೈಕೋ ಒಪ್ಪದಿದ್ದಾಗ ಅವರನ್ನು ಸೀರೆಯಿಂದ ಬಿಗಿದು ಕೊಲೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.



Join Whatsapp