86ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಸಮಿತಿಯ ಸಭೆ

Prasthutha|

ಬೆಂಗಳೂರು: ಇದೇ ವರ್ಷದ ನವಂಬರ್ ತಿಂಗಳ 11, 12 ಮತ್ತು 13ರಂದು ಹಾವೇರಿಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿದ್ದು ಇದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

- Advertisement -

ಈ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ಪರಂಪರೆ, ಹಿರಿಮೆ, ವರ್ತಮಾನದ ಸವಾಲುಗಳು, ಭವಿಷ್ಯದ ಸಾಧ್ಯತೆಗಳು, ಕನ್ನಡಪರ ಚಿಂತನೆಯ ವಿಸ್ತಾರ, ನಾಡು-ನುಡಿ ಸಮಸ್ಯೆಗಳು ಮತ್ತು ಪರಿಹಾರ, ಕನ್ನಡ ಶಾಲೆಗಳ ಉಳಿವು, ಕನ್ನಡವನ್ನು ಅನ್ನದ ಭಾಷೆಯನ್ನಾಗಿಸುವ ಪ್ರಯತ್ನಗಳು, ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ-2022ದ ಅನುಷ್ಠಾನ, ಪ್ರಮುಖ ಜ್ಞಾನ ಶಿಸ್ತುಗಳಾದ ವಿಜ್ಞಾನ ಮತ್ತು ತಂತ್ರಜ್ಞಾನ. ಕೃಷಿ, ಕ್ರೀಡೆ, ಆರ್ಥಿಕ ನೆಲೆಗಳು, ಅಧ್ಯಾತ್ಮ ಸೇರಿ ದಂತೆ ಹಲವು ಪ್ರಮುಖ ಕ್ಷೇತ್ರ ಮತ್ತು ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ನಾಡಿನ ಗಡಿನಾಡು, ಹೊರನಾಡು ಕನ್ನಡಿಗರ ಸಮಸ್ಯೆಗಳೂ ಇಲ್ಲಿ ಪ್ರತಿನಿಧಿತವಾಗಲಿವೆ. ಸಮಗ್ರತೆ ಮತ್ತು ಪ್ರಾತಿನಿಧ್ಯವನ್ನು ಕಾಪಾಡಿ ಕೊಂಡು ಮಹತ್ವದ ಗುಣಾತ್ಮಕ ಕೊಡುಗೆಯನ್ನು ನಾಡಿಗೆ ನೀಡುವ ಮೂಲಕ ಸಮ್ಮೇಳನವನ್ನು ಅರ್ಥಪೂರ್ಣವಾಗಿಸಲು ನಿರ್ಧರಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತು ಆಗಿಸಲು ಸಂಕಲ್ಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಾರ್ವಜನಿಕರನ್ನು ವಿಚಾರ ಮಂಡನೆಯೂ ಸೇರಿದಂತೆ ಸಮ್ಮೇಳನದಲ್ಲಿ ಮುಕ್ತವಾಗಿ ತೊಡಗಿಸಿ ಕೊಳ್ಳಲು ಈಗಾಗಲೇ ಪತ್ರಿಕೆಗಳ ಮೂಲಕ ಪ್ರಕಟಣೆ ನೀಡಿದ್ದು, ಈ ಮೂಲಕ ಸಮ್ಮೇಳನ ಕೂಡ ಜನ ಸಾಮಾನ್ಯರ ಸಮ್ಮೇಳನವನ್ನಾಗಿಸಲು ಮುಂದಾಗಿದ್ದಾರೆ. ಕನ್ನಡ ಪರ ಮನಸ್ಸ ಗಳೆಲ್ಲವೂ ಒಟ್ಟಾಗಿ ಕಲಿತು ಚಿಂತನ-ಮಂಥನ ನಡೆಸುವಂತೆ ಆಗ ಬೇಕೆನ್ನುವುದು ಪ್ರಮುಖ ಉದ್ದೇಶವಾಗಿದೆ.

- Advertisement -

ಸಮ್ಮೇಳನದಲ್ಲಿ ಪ್ರಧಾನ ವೇದಿಕೆ ಮತ್ತು ಸಮಾನಾಂತರ ವೇದಿಕೆಗಳಲ್ಲಿ ನಾನಾ ಗೋಷ್ಠಿಗಳು, ಸಂವಾದ ನಡೆಯಲಿವೆ. ಈ ಗೋಷ್ಠಿಗಳ ವಿಷಯಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಕೆಳ ಕಂಡವರು ಸಮಿತಿಯ ಸದಸ್ಯರಾಗಿರಲಿದ್ದಾರೆ.

ಈ ಸಮಿತಿಯ ಮೊದಲ ಸಭೆಯು ಸೆ.17ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖಾಗಿ ಸಮ್ಮೇಳನದಲ್ಲಿ ಮಂಡಿತವಾಗುವ ವಿಷಯಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯ ಇತ್ಯಾದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp