ಕಳ್ಳತನದ ಆರೋಪ ಹೊರಿಸಿ ವ್ಯಕ್ತಿಯನ್ನು ಹತ್ಯೆಗೈದ 7 ಎಂಜಿನಿಯರ್’ಗಳ ಬಂಧನ

Prasthutha|

ಚೆನ್ನೈ: ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ತನ್ನ ಸ್ನೇಹಿತರೊಂದಿಗೆ ಕಬ್ಬಿಣದ ಸರಳುಗಳನ್ನು ಕದಿಯಲು ಯತ್ನಿಸುತ್ತಿದ್ದ ಎಂದು ಆರೋಪಿಸಿ 23 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದಿರುವ ಘಟನೆ ಚೆನ್ನೈನ ಸಾಯಿದ್ ಪೇಟ್ ಬಳಿಯ ಟಾಡ್ ಹಂಟರ್ ನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಏಳು ಮಂದಿ  ಸಿವಿಲ್ ಎಂಜಿನಿಯರ್ ಗಳು ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಮೃತನನ್ನು ಸಾಯಿದ್ ಪೇಟ್ ನಿವಾಸಿ ಶಾಹೀನ್ ಷಾ ಖಾದರ್ ಎಂದು ಗುರುತಿಸಲಾಗಿದ್ದು, ಆರೋಪಿಗಳಾದ  ಜೈರಾಮ್ (30), ಪಿ. ಉಮಾ ಮಹೇಶ್ವರನ್ (33), ಟಿ. ಬಾಲಸುಬ್ರಮಣಿಯನ್ (29), ಎಂ. ಅಜಿತ್ ಕುಮಾರ್ (27), ಎ. ಸಕ್ತಿವೇಲ್ (29), ವಿ. ನಂಬಿರಾಜ್ (29) ಮತ್ತು ಜಿ. ಮನೋಜ್ (21)  ಇವರೊಂದಿಗೆ ಕಟ್ಟಡ ನಿರ್ಮಾಣ ಕಾರ್ಮಿಕ ಪಿ. ಸಿವಪ್ರಕಾಸಂ (22) ಎಂಬಾತನನ್ನೂ ಕೊಲೆ ಆರೋಪದಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ  ನಿರ್ಮಾಣ ಸ್ಥಳಕ್ಕೆ ಮೂವರು ಅತಿಕ್ರಮವಾಗಿ ಪ್ರವೇಶಿಸಿ ಅಲ್ಲಿದ್ದ ಕಬ್ಬಿಣದ ಸರಳುಗಳನ್ನು ಕಳವು ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದರು.  ಆ ಸಮಯದಲ್ಲಿ ಅವರನ್ನು ಎಂಜಿನಿಯರ್’ಗಳು ಮತ್ತು ಕೆಲಸಗಾರರು ತಡೆದಿದ್ದರು. ಈ ಪೈಕಿ ಓರ್ವ ವ್ಯಕ್ತಿ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾದರೆ, ಸೆರೆ ಸಿಕ್ಕ ಖಾದರ್ ಹಾಗೂ ಓರ್ವ ಅಪ್ರಾಪ್ತನನ್ನು ಕಬ್ಬಿಣದ ಸರಳು ಹಾಗೂ ದೊಣ್ಣೆಗಳಿಂದ  ಥಳಿಸಲಾಗಿತ್ತು.  ತೀವ್ರವಾಗಿ ಗಾಯಗೊಂಡಿದ್ದ ಅವರಿಬ್ಬರನ್ನೂ ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರೂ, ಖಾದರ್ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಕೊನೆಯುಸಿರೆಳೆದಿದ್ದಾನೆ.

- Advertisement -

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ ಪೊಲೀಸರು ತಿಳಿಸಿದ್ದಾರೆ.

Join Whatsapp