ಮಳೆ ಅನಾಹುತ: 691 ಕುಟುಂಬಗಳಿಗೆ ಎರಡು ದಿನದೊಳಗೆ ತಲಾ ರೂ 25,000 ಪರಿಹಾರ ನೀಡಲು ಸೂಚನೆ

Prasthutha|

ದಾವೋಸ್/ಬೆಂಗಳೂರು: ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಬೆಂಗಳೂರಿನ ಪೂರ್ವ ವಲಯದಲ್ಲಿ 691 ಮನೆಗಳಿಗೆ ನೀರು ನುಗ್ಗಿ ನಷ್ಟವಾಗಿದ್ದು, ಈ ಕುಟುಂಬಗಳಿಗೆ ಎರಡು ದಿನಗಳೊಳಗೆ ತಲಾ 25,000 ರೂಪಾಯಿ ಪರಿಹಾರ ನೀಡಬೇಕು ಎಂದು ಕಾರ್ಯಪಡೆ ಮುಖ್ಯಸ್ಥ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

- Advertisement -

ಮಳೆಯಿಂದ ಉಂಟಾಗುವ ಸಮಸ್ಯೆಗಳ ನಿರ್ವಹಣೆಗೆ ಬೆಂಗಳೂರು ಪೂರ್ವ ವಲಯದ ಕಾರ್ಯಪಡೆ ಮುಖ್ಯಸ್ಥರಾಗಿ ನೇಮಕಗೊಂಡಿರುವ ಅವರು ದಾವೋಸ್ ನಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಮೇಲಿನ ಸೂಚನೆ ನೀಡಿದರು.


ತಲಾ 25,000 ರೂಪಾಯಿಯಂತೆ ದವಸ ಧಾನ್ಯ ನಷ್ಟದಂತಹ ಸಮಸ್ಯೆಗಳನ್ನು ಎದುರಿಸಿರುವ 691 ಕುಟುಂಬಗಳಿಗೆ ಒಟ್ಟು ಪರಿಹಾರದ ಮೊತ್ತ 1,73 ಕೋಟಿ ರೂಪಾಯಿ ಆಗುತ್ತದೆ. ಸಂಬಂಧಿಸಿದ ದಾಖಲೀಕರಣವನ್ನು ಮಂಗಳವಾರ ಮುಗಿಸಿ ಬುಧವಾರದೊಳಗೆ ಪರಿಹಾರ ಧನ ನೀಡುವಂತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದ್ದಾರೆ.

- Advertisement -


ಆಕ್ಸ್ ಫರ್ಡ್, ಕೇಂಬ್ರಿಜ್ ವಿ.ವಿ.ಗಳ ಜೊತೆ ಉನ್ನತ ಶಿಕ್ಷಣ ಸಚಿವರ ಸಮಾಲೋಚನೆ
ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಶಿಕ್ಷಣ ಸಮಾವೇಶದಲ್ಲಿ (ಎಜುಕೇಷನ್ ವರ್ಲ್ಡ್ ಫೋರಂ) ಭಾಗವಹಿಸಿರುವ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆಕ್ಸ್ ಫರ್ಡ್, ಕೇಂಬ್ರಿಜ್ ಸೇರಿದಂತೆ ವಿಶ್ವದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪ್ರಮುಖರ ಜೊತೆ ಸೋಮವಾರ ಸಮಾಲೋಚನೆ ನಡೆಸಿದರು.


ವೆಸ್ಟ್ ಮಿನಿಸ್ಟರ್ನ ಕ್ವೀನ್ ಎಲಿಜಬೆತ್ 2ನೇ ಸೆಂಟರ್ನಲ್ಲಿ ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಹಲವಾರು ಮುಂಚೂಣಿ ಎಜುಟೆಕ್ ಕಂಪನಿಗಳು ಕೂಡ ಪಾಲ್ಗೊಂಡಿದ್ದು, ಸಚಿವರು ಆ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಕೂಡ ಚರ್ಚಿಸಿದರು. ಕರ್ನಾಟಕದ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬೋಧಕರ ತರಬೇತಿ, ಕೌಶಲಗಳ ತರಬೇತಿ, ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆ, ಉದ್ಯಮ ವಲಯ ಹಾಗೂ ಶಿಕ್ಷಣ ವಲಯಗಳ ಸಮನ್ವಯತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಅವರು ವಿಚಾರ ವಿನಿಮಯ ಮಾಡಿಕೊಂಡರು.

ಮುಖ್ಯವಾಗಿ ಉನ್ನತ ಶಿಕ್ಷಣ ಕಲಿಯುವಾಗಲೇ ವಿದ್ಯಾರ್ಥಿಗಳಿಗೆ ಉದ್ಯಮಗಳಿಗೆ ಬೇಕಾದ ಕೌಶಲಗಳನ್ನು ಮೈಗೂಡಿಸುವ ನಿಟ್ಟಿನಲ್ಲಿ ಯಾವ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಒತ್ತು ಕೊಟ್ಟು ಸಚಿವರು ಮಾತುಕತೆ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಆಯಾ ದೇಶ ಮತ್ತು ವಿಶ್ವವಿದ್ಯಾಲಯಗಳಲ್ಲಿ ಇರುವ ವಿವಿಧ ರೀತಿಯ ಉಪಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಡಿಸಿಟಿಇ ಆಯುಕ್ತ ಪಿ.ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ್ ಕೃಷ್ಣ ಜೋಷಿ, ಆಡಳಿತಾಧಿಕಾರಿ ಡಾ.ತಾಂಡವಗೌಡ ಅವರು ಇದ್ದರು.

Join Whatsapp