ಸ್ಪರ್ಧೆ ವೇಳೆ ಚೆನ್ನೈ ಟ್ರ್ಯಾಕ್‌ನಲ್ಲಿ ಅಪಘಾತ: ಬೆಂಗಳೂರಿನ ಕಿರಿಯ ರೈಡರ್ ಶ್ರೇಯಸ್ ಹರೀಶ್ ಮೃತ್ಯು

Prasthutha|

ಚೆನ್ನೈ: ಶನಿವಾರ ಚೆನ್ನೈನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನ ಸ್ಪರ್ಧೆ ವೇಳೆ ಅಪಘಾತಕ್ಕೀಡಾದ ಬೆಂಗಳೂರಿನ 13 ವರ್ಷದ ರೈಡರ್ ಕೊಪ್ಪರಂ ಶ್ರೇಯಸ್ ಹರೀಶ್ ನಿಧನರಾಗಿದ್ದಾರೆ.

- Advertisement -

ಹರೀಶ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದುಗೊಳಿಸಿದೆ.

2010 ಜುಲೈ 26ರಂದು ಜನಿಸಿದ ಶ್ರೇಯಸ್,  ಬೆಂಗಳೂರಿನ ಕೆನ್ಸ್ರಿ ಶಾಲೆಯ ವಿದ್ಯಾರ್ಥಿ. ಈತ ಪೆಟ್ರೋನಾಸ್‌ ಟಿವಿಎಸ್ ಒನ್-ಮೇಕ್ ಚಾಂಪಿಯನ್‌ಶಿಪ್ ಹೊಸಬರ ವಿಭಾಗದಲ್ಲಿ ಸ್ಪರ್ಧಿಸಿ ಸತತ ನಾಲ್ಕು ಬಾರಿ ಗೆದ್ದಿದ್ದು ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರೇಸ್‌ಗಳನ್ನು ಗೆದ್ದ ಕಾರಣ ಉದಯೋನ್ಮುಖ ತಾರೆ ಎಂದು ಪ್ರಶಂಸಿಸಲ್ಪಟ್ಟಿದ್ದರು.

- Advertisement -

ಇಂದು ಬೆಳಗ್ಗೆ ಪೋಲ್ ಪೊಸಿಷನ್‌ಗೆ ಅರ್ಹತೆ ಪಡೆದಿದ್ದ ರೈಡಿಂಗ್ ನಂತರ ಈ ಘಟನೆ ನಡೆದಿದೆ. ಟರ್ನ್-1 ನಿಂದ ನಿರ್ಗಮಿಸಿದ ಶ್ರೇಯಸ್ ಬಿದ್ದು ತಲೆಗೆ ಗಂಭೀರ ಗಾಯವಾಯಿತು.  ತಕ್ಷಣವೇ ರೇಸ್‌ ನಿಲ್ಲಿಸಲಾಗಿದೆ. ಟ್ರ್ಯಾಕ್‌ನಲ್ಲಿ ಇರಿಸಲಾಗಿದ್ದ ಟ್ರಾಮಾ ಕೇರ್ ಆಂಬ್ಯುಲೆನ್ಸ್‌ನಲ್ಲಿ ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಯುವ ಮತ್ತು ಪ್ರತಿಭಾವಂತ ರೈಡರ್ ಅನ್ನು ಕಳೆದುಕೊಂಡಿರುವುದು ದುರಂತ. ತನ್ನ ಅದ್ಭುತ ರೇಸಿಂಗ್ ಪ್ರತಿಭೆಯಿಂದ ಮಿಂಚುತ್ತಿದ್ದ ಶ್ರೇಯಸ್‌ಗೆ ಘಟನೆಯ ನಂತರ ತಕ್ಷಣವೇ ಸ್ಥಳದಲ್ಲೇ ವೈದ್ಯಕೀಯ ನೆರವು ಒದಗಿಸಲಾಯಿತು. ಆನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು MMSC ಅಧ್ಯಕ್ಷ ಅಜಿತ್ ಥಾಮಸ್ ಹೇಳಿದ್ದಾರೆ. ನಾವು ಈ ವಾರಾಂತ್ಯದ ಉಳಿದ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. MMSC ಸಂತಾಪ ವ್ಯಕ್ತಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ, MiniGP India ಪ್ರಶಸ್ತಿಯನ್ನು ಗೆದ್ದ ಶ್ರೇಯಸ್, ಸ್ಪೇನ್‌ನಲ್ಲಿ ನಡೆದ ಮಿನಿಜಿಪಿ ರೇಸ್‌ಗಳಲ್ಲಿ ಭಾಗವಹಿಸಿದ್ದರು. ಎರಡೂ ರೇಸ್‌ಗಳನ್ನು ಕ್ರಮವಾಗಿ ಐದು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಗಳಿಸಿದ್ದರು. ಇವರು ಆಗಸ್ಟ್‌ನಲ್ಲಿ ಮಲೇಷ್ಯಾದ ಸೆಪಾಂಗ್ ಸರ್ಕ್ಯೂಟ್‌ನಲ್ಲಿ MSBK ಚಾಂಪಿಯನ್‌ಶಿಪ್ 2023 ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು. 250cc ವಿಭಾಗದಲ್ಲಿ (ಗುಂಪು B) ತಂಡ CRA ಮೋಟಾರ್‌ಸ್ಪೋರ್ಟ್‌ಗಳನ್ನು ಶ್ರೇಯಸ್ ಪ್ರತಿನಿಧಿಸುತ್ತಾರೆ.



Join Whatsapp