ಮಕ್ಕಳ ಎದುರೇ ಧರ್ಮ ಗುರುವನ್ನು ಥಳಿಸಿ ಭೀಕರ ಹತ್ಯೆ

Prasthutha|

ಜೈಪುರ: ಮಸೀದಿಯಲ್ಲಿ ಧರ್ಮಗುರುವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಮಾಸ್ಕ್ ಹಾಕಿ ಮಸೀದಿಗೆ ನುಗ್ಗಿದ ಮೂವರಿದ್ದ ಗುಂಪೊಂದು ಥಳಿಸಿ ಭೀಕರವಾಗಿ ಹತ್ಯೆಗೈದ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಮುಹಮ್ಮದ್ ತಾಹಿರ್ (30) ಮೃತ ಧರ್ಮಗುರು. ರಾಮಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಚನ್ ನಗರ್‌ನಲ್ಲಿರುವ ಮಸೀದಿಯಲ್ಲಿ ಶನಿವಾರ ಸುಮಾರು ಮುಂಜಾನೆ 2 ಗಂಟೆಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಮಸೀದಿಗೆ ಪ್ರವೇಶಿಸಿ ಧರ್ಮಗುರು ಮುಹಮ್ಮದ್ ತಾಹಿರ್ ಅವರಿಗೆ ದೊಣ್ಣೆಯಿಂದ ಥಳಿಸಿದ್ದಾರೆ. ಹಲ್ಲೆಯ ತೀವ್ರತೆಗೆ ತಾಹಿರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಡೆಯುವ ಸಂದರ್ಭ ಮಸೀದಿಯ ಒಳಗೆ 6 ಮಕ್ಕಳಿದ್ದರು. ಮಕ್ಕಳು ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಬಳಿಕ ಮೂವರು ಮೃತ ವ್ಯಕ್ತಿಯ ಮಕ್ಕಳಿಗೆ ಘಟನೆಯನ್ನು ಬಹಿರಂಗಪಡಿಸದಂತೆ ಬೆದರಿಕೆ ಒಡ್ಡಿ, ಅವರ ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

- Advertisement -

ಘಟನೆ ಕುರಿತಂತೆ ದುಷ್ಕರ್ಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಯಾರ ಬಂಧನವೂ ನಡೆದಿಲ್ಲ. ದುಷ್ಕರ್ಮಿಗಳ ಬಂಧನಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp