ಮಂಗಳೂರು | ಕಾಂಗ್ರೆಸ್ ಕೋವಿಡ್ ಹೆಲ್ಪ್ ಲೈನ್ ವತಿಯಿಂದ ಆಹಾರ ಕಿಟ್ ವಿತರಣೆ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ವತಿಯಿಂದ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಪುಣ್ಯತಿಥಿಯ ಸ್ಮರಣಾರ್ಥ ಒಂದು ಸಾವಿರ ಕುಟುಂಬಗಳಿಗೆ ನಗರದ ನಾಲ್ಕು ಕಡೆಗಳಲ್ಲಿ ಕಿಟ್ ವಿತರಣೆಯು ನಡೆಯಿತು. ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನ, ನಾಗುರಿ ಜಂಕ್ಷನ್, ಅಶೋಕ ನಗರ ಶಾಲೆಯ ಬಳಿ ಕಸ ವಿಲೇವಾರಿ ಮಾಡುವವರಿಗೆ, ಕೊಟ್ಟಾರ ಚೌಕಿ ಒವರ್ ಬ್ರಿಡ್ಜ್ ಬಳಿ ಟೆಂಪೋ ಚಾಲಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯು ನಡೆಯಿತು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ಸಂಚಾಲಕ ಐವನ್ ಡಿ’ಸೋಜಾ ಮಾತನಾಡಿ ” ಕೊರೊನಾ ಸಂಕಷ್ಟದ ಸಮಯದಲ್ಲಿ, ಮಾನವೀಯತೆಯ ದೃಷ್ಟಯಿಂದ ಒಬ್ಬರಿಗೊಬ್ಬರು ಸಹಾಯ ಮಾಡಿ ಒಟ್ಟಾಗಿ ನಿಲ್ಲುವುದು ನಮ್ಮ ಕರ್ತವ್ಯ. ಹೆಚ್ಚು ತೊಂದರೆಯಲ್ಲಿರುವ ಜನರಿಗೆ ನಾವು ಸಹಾಯ ಹಸ್ತ ಚಾಚಬೇಕು ಎಂಬುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಾವು ರಾಜೀವ್ ಗಾಂಧಿಯವರ ಸಿದ್ಧಾಂತವನ್ನು ಬಲವಾಗಿ ನಂಬಿದ್ದೇವೆ ಮತ್ತು ಅದನ್ನು ಪಾಲಿಸುತ್ತಾ ಬಂದಿದ್ದೇವೆ” ಎಂದು ತಿಳಿಸಿದರು.

- Advertisement -


ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ಚೇರ್ಮನ್ ಮತ್ತು ಸಿ.ಇ.ಒ ವಿವೇಕ್ ರಾಜ್ ಪೂಜಾರಿ ಮಾತನಾಡಿ ” ನಾವು ಕಳೆದ ವರ್ಷವೂ ಕೊರೊನಾ ಸಂಕಷ್ಟದ ಸಮಯದಲ್ಲಿ ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವ ಈ ಮಹಾತ್ಕಾರ್ಯವನ್ನು ಪ್ರಾರಂಭಿಸಿದ್ದೆವು. ಅಂದು 1000 ವಲಸೆ ಕಾರ್ಮಿಕರ ಬೆನ್ನೆಲುಬಾಗಿ ನಿಂತು, ಅವರಿಗೆ ಅಗತ್ಯವಿರುವ ಎಲ್ಲ ಸಾಮಾಗ್ರಿಗಳನ್ನು ಒದಗಿಸಿದೆವು. ಎಲ್ಲಿಯವರೆಗೆ ಸಹಾಯ ಮಾಡಲು ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೆ ಸಹಾಯಮಾಡಿ ಜನರಿಗೆ ಸೇವೆ ಸಲ್ಲಿಸುತ್ತೇವೆ ” ಎಂದರು.


ಕಿಟ್ ವಿತರಣೆ ನೇತೃತ್ವವನ್ನು ಪಾಲಿಕೆಯ ಮಾಜಿ ಕಾರ್ಪೊರೇಟರ್ ಅಪ್ಪಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ಆಶಿತ್ ಜಿ.ಪಿರೇರಾ, ಮಹೇಶ್ ಕೋಡಿಕ್ಕಲ್, ಆಲಿಸ್ಟನ್ ಡಿಕುನ್ಹಾ ಮತ್ತು ಅನಿಲ್ ಡಿ’ಸೋಜಾ ವಹಿಸಿದ್ದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರುಗಳು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ನ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Join Whatsapp