ಬಾಬಾಬುಡನ್ ಗಿರಿ ಮಸೀದಿಯ ಧ್ವನಿವರ್ಧಕ ಕೂಡಲೇ ಅಳವಡಿಸಿ; ಎಸ್ ಡಿಪಿಐ ಒತ್ತಾಯ

Prasthutha|

ನವೆಂಬರ್ 25 ರಂದು ದತ್ತ ಪಾದುಕೆಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸಂಘಪರಿವಾರದ ಒತ್ತಡಕ್ಕೆ ಮಣಿದು 900 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬಾಬಾಬುಡನ್ ಗಿರಿ ಮಸೀದಿಯ ಧ್ವನಿವರ್ಧಕವನ್ನು ತೆರವುಗೊಳಿಸಿರುವುದು ಖಂಡನೀಯ. ಜಿಲ್ಲಾಡಳಿತ ತಕ್ಷಣ ತಾತ್ಕಾಲಿಕವಾಗಿ ತೆರವು ಗೊಳಿಸಿರುವ ಮೈಕ್ ಅನ್ನು ಪುನಃ ಅಳವಡಿಸಬೇಕು ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನವೆಂಬರ್ 25ರಂದು ಸಂಘಪರಿವಾರ ಪ್ರಾಯೋಜಿತ ದತ್ತಮಾಲೆ ಅಭಿಯಾನ ಆಚರಿಸಲು ಅವಕಾಶ ಮಾಡಿಕೊಡುವ ಮೂಲಕ ಜಿಲ್ಲಾಡಳಿತ ಬಾಬಾಬುಡನ್ ಗಿರಿ ಯಲ್ಲಿ 1975 ರ ಹಿಂದೆ ಇದ್ದಂತಹ ಧಾರ್ಮಿಕ ವಿಧಿ ವಿಧಾನಗಳನ್ನು ಹೊರತುಪಡಿಸಿ ಯಾವುದೇ ಹೊಸ ಆಚರಣೆಗಳಿಗೆ ಅವಕಾಶ ನೀಡಬಾರದು ಎಂಬ ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಎಸ್ ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಅಬ್ದುಲ್ ಮಜೀದ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರ ನೇತೃತ್ವದ ಎಸ್ ಡಿಪಿಐ ನಿಯೋಗ, ಬಾಬಾಬುಡನ್ ಗಿರಿ ದರ್ಗಾದ ಮಸೀದಿಗೆ ಭೇಟಿ ನೀಡಿ ಅಲ್ಲಿನ ಸಜ್ಜಾದ್ ನಶೀನ್ ಅವರೊಂದಿಗೆ ಮಾಹಿತಿ ಪಡೆಯಿತು. ರಾಜ್ಯ ಮತ್ತು ನೆರೆ ರಾಜ್ಯಗಳ ಹಿಂದೂ ಮತ್ತು ಮುಸ್ಲಿಂ ಧರ್ಮದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದಿನಂಪ್ರತಿ ಇಲ್ಲಿಗೆ ಆಗಮಿಸಿ ಸೂಫಿ ಸಂತರ ಆಶೀರ್ವಾದ ಪಡೆಯುವ ಸಂಪ್ರದಾಯ ಕಳೆದ 900 ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಸಂಘಪರಿವಾರ ಪ್ರಾಯೋಜಿತ ದತ್ತಮಾಲೆ ಎಂಬ ನೂತನ ಆಚರಣೆ ದಿನದಂದು ಗಿರಿಯಲ್ಲಿ ಭಯದ ವಾತಾವರಣ ಸೃಷ್ಟಿಸಿ ಬೇರೆ ಧರ್ಮದ ಭಕ್ತಾದಿಗಳಿಗೆ ಬಾಬಾಬುಡನ್ ಗಿರಿಗೆ ಪ್ರವೇಶ ನಿರಾಕರಣೆ ಮಾಡುವುದನ್ನು ಎಸ್ ಡಿಪಿಐ ಖಂಡಿಸುತ್ತದೆ ಎಂದು ಅಪ್ಸರ್ ಕೊಡ್ಲಿಪೇಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ

Join Whatsapp