ಬರಿ ಭರವಸೆಗಳಿಂದ ಹೊಟ್ಟೆ ತುಂಬದು : ವಿಶ್ವರಾಧ್ಯ ಯಮೋಜಿ

Prasthutha|

ಬೆಂಗಳೂರು:  ಕೋವಿಡ್ -19 ರೂಪಾಂತರ ವಿಷಮ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ  ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಯಂತೆ ಸಮಾನ ವೇತನ ಹಾಗೂ ಸೇವಾ ಭಧ್ರತೆಯೊಂದಿಗೆ ಸರ್ಕಾರ ರಚಿಸಿದ  ಶ್ರೀನಿವಾಸಚಾರಿ ಸಮಿತಿಯ ಶಿಫಾರಸ್ಸು ಜಾರಿಗೊಳಿಗೊಳಿಸುವಂತೆ  ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾದ್ಯಕ್ಷ  ವಿಶ್ವರಾಧ್ಯ ಎಚ್. ಯಮೋಜಿ ಒತ್ತಾಯಿಸಿದ್ದಾರೆ.

- Advertisement -

ಈ ಕುರಿತಂತೆ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ಕೋವಿಡ್-19 ಈ ವಿಷಮ  ಪರಿಸ್ಥಿತಿಯಲ್ಲಿ  ರಾತ್ರಿ – ಹಗಲಿರುಳು ರಜೆ  ತೆಗೆದುಕೊಳ್ಳದೆ ದುಡಿದ  ಗುತ್ತಿಗೆ ಮತ್ತು ಹೊರಗುತ್ತಿಗೆ “ವಾರಿಯರ್ಸ್” ಗಳ ಬಗ್ಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ  ತಮ್ಮ ಬಹು ದಿನಗಳ ಬೇಡಿಕೆ ಈಡೇರಿಸಲು ಮೀನಾಮೇಷ  ಮಾಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಕಣ್ಣು ತೆರಸಲು ಮತ್ತೆ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕೋವಿಡ್-19  ಸಾಂಕ್ರಾಮಿಕ ರೋಗ ಕಳೆದ ವರ್ಷ ಜನವರಿ-30 ರಂದು ಕಾಲಿರಿಸಿದ್ದು  ಪ್ರಸಕ್ತ ವರ್ಷ ಏಪ್ರಿಲ್ 2021ರಲ್ಲಿ ಇದೇ ರೋಗದ ಎರಡನೆ ಅಲೆ ಆರೋಗ್ಯ ಸೇವೆಗಳನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದೆ. ಏಪ್ರಿಲ್ ಅಂತ್ಯದ ವೇಳೆಗೆ ಭಾರತದಲ್ಲಿ ದಿನಕ್ಕೆ 3 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳ ವರದಿಯಾಗಿದ್ದು, ಇಂತಹ ಗಂಬೀರ ಸ್ಥಿತಿಯಲ್ಲೂ ಗುತ್ತಿಗೆ ನೌಕರರು ಕನಿಷ್ಠ ವೇತನ ತೆಗೆದು ಕೊಂಡು ಅದೂ ಅಲ್ಲದೆ ಪ್ರತಿ ತಿಂಗಳು ವೇತನ ಬಾರದೆ ಇದ್ದರೂ ಸರ್ಕಾರದ ಎಲ್ಲಾ ನಿಯಮಾವಳಿ ಪಾಲಿಸಿ ಸಾರ್ವಜನಿಕರ ಪ್ರಾಣ ಉಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು  ಮಾನವೀಯತೆ ಮೆರೆದಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

- Advertisement -

ಆರೋಗ್ಯ ಸಚಿವ ಡಾ. ಕೆ ಸುಧಾಕರ್  ಅಧ್ಯಕ್ಷತೆಯಲ್ಲಿ  ಕಳೆದ ಮಾರ್ಚ್ 18ರಂದು ನಡೆದ ಸಭೆಯಲ್ಲಿ ಪ್ರಮುಖ ಬೇಡಿಕೆಗಳ ಹಾಗೂ ಸಮಿತಿಯ ವರದಿಯ ಬಗ್ಗೆ ಚರ್ಚಿಸಲಾಗಿದ್ದು ಅನುಷ್ಠಾನದ ಭರವಸೆ ನೀಡಿದ್ದರು. ಕೋವಿಡ್-19 ಆಪತ್ತು ಭತ್ಯೆಯನ್ನು ಎಲ್ಲಾ ಹಂತದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಕೊಡುವ ಬೇಡಿಕೆಯನ್ನು ಸರ್ಕಾರ ಸಂಪೂರ್ಣವಾಗಿ ಪೂರೈಸಿಲ್ಲ ಎಂದು  ಸಂಘದ ಪ್ರಧಾನ ಕಾರ್ಯದರ್ಶಿ ಕಾಂತಸ್ವಾಮಿ ತಿಳಿಸಿದ್ದಾರೆ.

ಭಾರತೀಯ ಮಜ್ದೂರ್ ಸಂಘ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸರ್ಕಾರಕ್ಕೆ ಅನೇಕ ಬಾರಿ ಪತ್ರ ಬರೆದಿದ್ದರೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ, ಹಿಂದೆ ತಮ್ಮದೆ ಸರ್ಕಾರದ ಆದೇಶದಂತೆ ರಚಿಸಿದ ಸಮಿತಿಯಾದ ಪಿ. ಎನ್. ಶ್ರೀನಿವಾಸಾಚಾರಿರವರ ಸಮಿತಿಯ ವರದಿಯ ಅನುಷ್ಠಾನದೊಂದಿಗೆ “ವೇತನ ಪರಿಷ್ಕರಣೆ ಹಾಗೂ ಸೇವಾ ಭದ್ರತೆಯನ್ನು” ನೀಡಲು ಈ ಮೂಲಕ ಮಾನ್ಯ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು

Join Whatsapp