ಕೋವಿಡ್ 19 ಹರಡುವಿಕೆಯನ್ನು ತಡೆಯಲು ಖೈದಿಗಳ ಸಂಖ್ಯೆಯನ್ನು ತಗ್ಗಿಸಿ: ಪಾಪ್ಯುಲರ್ ಫ್ರಂಟ್

Prasthutha|

ಹೋರಾಟಗಾರರು ಮತ್ತು ಬುದ್ಧಿಜೀವಿಗಳ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಬಂಧನದ ವಿರೋಧ ಮತ್ತು ದೇಶದ ಜೈಲುಗಳಲ್ಲಿರುವ ಖೈದಿಗಳ ನಡುವೆ ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಅಧಿಕಾರಿಗಳ ಕಾಳಜಿಯ ಕೊರತೆಯ ಕುರಿತಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಭಾರತೀಯ ಜೈಲುಗಳು ಮೊದಲೇ ಶೇ.114ರಷ್ಟು ರಾಷ್ಟ್ರೀಯ ಸರಾಸರಿ ಅನುಪಾತದೊಂದಿಗೆ ತುಂಬಿ ತುಳುಕುತ್ತಿದೆ ಮತ್ತು ಉತ್ತರ‌ ಪ್ರದೇಶದಂತಹ ರಾಜ್ಯಗಳಲ್ಲಿ ಈ ಅನುಪಾತವು ತುಂಬಾ ಹೆಚ್ಚಿದೆ ಎಂದು ಅಧ್ಯಯನಗಳು ತೋರಿಸುತ್ತಿವೆ. ಈ ಖೈದಿಗಳಲ್ಲಿ ಬಹುಪಾಲು ಸಂಖ್ಯೆಯು ವಿಚಾರಣಾಧೀನ ಖೈದಿಗಳದ್ದಾಗಿದೆ. ಭಾರತದ ಅತಿದೊಡ್ಡ ಜೈಲು ತಿಹಾರ್ ಒಂದರಲ್ಲೇ 17,500 ವಿಚಾರಣಾಧೀನ ಖೈದಿಗಳಿದ್ದಾರೆ. ದೇಶದ ಜೈಲುಗಳಲ್ಲಿ ಕೋವಿಡ್ 19 ಪಿಡುಗು ವೇಗವಾಗಿ ಹರಡುತ್ತಿದೆ ಮತ್ತು ಸನ್ನಿವೇಶವನ್ನು ನಿಭಾಯಿಸಲು ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ,ಪರಿಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬ ಸದ್ಯದ ವರದಿಯು ಭಯಾನಕವಾಗಿದೆ. ಹೋರಾಟಗಾರ ವರವರ ರಾವ್, ಅಸ್ಸಾಮೀ ಹೋರಾಟಗಾರ ಅಖಿಲ್ ಗೊಗೋಯ್ ಮತ್ತು ಶರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಖೈದಿಗಳ ಸೋಂಕಿನ ಪರೀಕ್ಷೆಯ ವರದಿಗಳು ಪೊಸಿಟಿವ್ ಆಗಿವೆ. 80ರ ಹರೆಯದ ವೃದ್ಧ ರಾವ್ ಸೂಕ್ತ ಸೌಕರ್ಯಗಳಿಲ್ಲದೇ ಮತ್ತು ಅವರ ಆರೈಕೆಗಾಗಿ ಯಾರೂ ಇಲ್ಲದೇ ಕರುಣಾಜನಕವಾಗಿ ಅನಾರೋಗ್ಯ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಖೈದಿಗಳ ಸಂರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಬದಲಾಗಿ ಅವರನ್ನು ಈ ಸ್ಥಿತಿಯಲ್ಲಿ ಬಿಟ್ಟುಬಿಡುವುದಲ್ಲ. ಸರಕಾರವು ಉದ್ದೇಶಪೂರ್ವಕವಾಗಿ ಅವರನ್ನು ಸಾಯಲು ಬಿಡುತ್ತಿದೆ.

ಕೊರೋನ ಪಿಡುಗಿನ ಈ ವೇಳೆಯಲ್ಲಿ ಜೈಲುಗಳಲ್ಲಿರುವ ಖೈದಿಗಳ ನಡುವೆ ಸೋಂಕು ಹರಡುವುದನ್ನು ತಡೆಯಲು ಜೈಲುಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುವ ಕುರಿತಾದ ಜಾಗತಿಕ ಪ್ರಜ್ಞೆಯು ಹೆಚ್ಚುತ್ತಿವೆ. ಆದಾಗ್ಯೂ, ಭಾರತವು ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿದೆ. ಭಾರತದಲ್ಲಿ ಈ ಅಸಹಾಯಕ ಪರಿಸ್ಥಿತಿಯನ್ನು ದುರ್ಬಳಕೆ ಮಾಡುತ್ತಾ, ಕಾನೂನು ಜಾರಿ ಮಾಡುವ ವಿವಿಧ ಏಜೆನ್ಸಿಗಳು ಸರಕಾರದ ನೀತಿಗಳನ್ನು ಟೀಕಿಸಿದ ಹೋರಾಟಗಾರರು ಮತ್ತು ವ್ಯಕ್ತಿಗಳ ಬೆನ್ನು ಬಿದ್ದಿದೆ. ದಿನನಿತ್ಯವೂ ಹೊಸ ಬಂಧನಗಳನ್ನು ನಡೆಸಲಾಗುತ್ತಿದೆ. ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ವಿವಿ ಪ್ರಧ್ಯಾಪಕ ಹನಿ ಬಾಬುರವರನ್ನು ಎನ್.ಐ.ಎ ಬಂಧಿಸಿರುವುದು ಅತಿರೇಕದ್ದಾಗಿದೆ. ಓರ್ವ ಹೋರಾಟಗಾರನಾಗಿ ಮತ್ತು ಶಿಕ್ಷಣ ತಜ್ಞನಾಗಿ ಅವರು ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೊಳಗೊಳ್ಳುವಿಕೆಯ ಪ್ರಬಲ ಧ್ವನಿಯಾಗಿದ್ದಾರೆ. ಎನ್.ಐ.ಎ ಆರೋಪಗಳಲ್ಲಿ ಯಾವುದೇ ತಿರುಳಿಲ್ಲ. ಇತರ ಸಿಲುಕಿಸಲಾದ ಪ್ರಕರಣಗಳಂತೆಯೇ, ಅವರು ತನ್ನ ನಿಲುವುಗಳಿಗಾಗಿ ಕೇವಲ ಬೇಟೆಯಾಡಲ್ಪಟ್ಟ ಇನ್ನೋರ್ವ ಅಮಾಯಕರಾಗಿದ್ದಾರೆ.

- Advertisement -

ಪಾಪ್ಯುಲರ್ ಫ್ರಂಟ್ ಈ ಬಂಧನವನ್ನು ಖಂಡಿಸುತ್ತದೆ. ಅದೇ ರೀತಿ ಇಂತಹ ಬಂಧನಗಳನ್ನು ತುರ್ತಾಗಿ ತಡೆಯಲು ಮತ್ತು ಜೈಲುಗಳಿಂದ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಿ ಜೈಲುಗಳಲ್ಲಿ ಸುರಕ್ಷಿತ‌ ವಾತಾವರಣವನ್ನು ಖಾತರಿಪಡಿಸಲು ಉನ್ನತ ನ್ಯಾಯಾಂಗ ಮಧ್ಯಪ್ರವೇಶವನ್ನು ಒತ್ತಾಯಿಸುತ್ತದೆ.

Join Whatsapp