ಕಾಂಗ್ರೆಸ್ ಗೆ ಜಾತಿಯ ಕೆಸರು ಅಂಟಿಸಿದ ಡಿ.ಕೆ.ಶಿ- ಸಿದ್ದರಾಮಯ್ಯ: ಕೆ.ಎಸ್.ಈಶ್ವರಪ್ಪ ಟೀಕೆ

Prasthutha|

ಮೈಸೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ನ ಭ್ರಷ್ಟತನ ಬಯಲಾಗಿದ್ದು,  ರಮೇಶ್ ಕುಮಾರ್ ಸತ್ಯವನ್ನೇ ನುಡಿದಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಮ್ಮ ಸರ್ಕಾರದ ಮೇಲೆ 40% ಲಂಚದ ಆರೋಪ ಮಾಡುತ್ತದೆ. ನಮ್ಮ ಸರ್ಕಾರದ ಯಾವ ಸಚಿವರು ಮೇಲೂ ಒಂದೇ ಒಂದು ಲಂಚದ ನಿರ್ದಿಷ್ಟ ಪ್ರಕರಣ ಇಲ್ಲ. 40% ಆರೋಪ ಮಾಡುವ ಕಾಂಗ್ರೆಸ್ ಒಂದೇ ಒಂದು ಕೇಸ್ ಎತ್ತಿ ತೋರಿಸಲಿ ಎಂದು  ಸವಾಲೆಸೆದರು.

ಡಿ.ಕೆ.ಶಿವಕುಮಾರ್-  ಸಿದ್ದರಾಮಯ್ಯ ಇಬ್ಬರೂ ಸೇರಿ ಕಾಂಗ್ರೆಸ್ ಗೆ ಜಾತಿ ಪಟ್ಟ ಅಂಟಿಸಿದ್ದಾರೆ. ಡಿ.ಕೆ.ಶಿವಕುಮಾರ್ ತಾನು ಸಿಎಂ ಆಗಲು ತನ್ನ ಸಮುದಾಯ ತನ್ನ ಬೆನ್ನಿಗೆ ಬರಬೇಕು ಎಂದು ಹೇಳುವ ಮೂಲಕ ಜಾತಿವಾದಿಯಾಗಿದ್ದಾರೆ. ಸಿದ್ದರಾಮಯ್ಯ ಕುರುಬರ ನಾಯಕ ಎಂದು ಹೇಳುವ ಮೂಲಕ ಅವರು ಕೂಡಾ ಜಾತಿವಾದಿಯಾಗಿದ್ದಾರೆ‌ ಇವರಿಬ್ಬರು ಸೇರಿ ಕಾಂಗ್ರೆಸ್ ಗೆ ಜಾತಿಯ ಕೆಸರು ಅಂಟಿಸಿದ್ದಾರೆ ಎಂದು ಟೀಕಿಸಿದರು.

- Advertisement -

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಬಿ ರಿಪೋರ್ಟ್ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಾನು ಯಾವ ತಪ್ಪು ಮಾಡಿಲ್ಲ. ನನಗೆ ಮೊದಲ ದಿನವೇ ಈ ಪ್ರಕರಣದಿಂದ‌ ಆರೋಪ ಮುಕ್ತನಾಗಿ ಬರುತ್ತೇನೆಂದು ತಿಳಿದಿತ್ತು. ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಕೊಟ್ಟು, ತನಿಖೆ ಮೂಲಕ ಈಗ ಸಂಪೂರ್ಣ ಆರೋಪ ಮುಕ್ತನಾಗಿದ್ದೇನೆ ಎಂದು ಹೇಳಿದರು.

Join Whatsapp
Exit mobile version