ನಾಗಮಂಗಲ ಗಲಭೆ, ಸಂಘ ಪರಿವಾರದ ಯೋಜಿತ ಷಡ್ಯಂತ್ರ, ಪೊಲೀಸ್ ವೈಫಲ್ಯ: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಅಬ್ದುಲ್ ಮಜೀದ್

Prasthutha|

- Advertisement -

ನಾಗಮಂಗಲ: ನಾಗಮಂಗಲ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆಗಳು ಯೋಜಿತ ಷಡ್ಯಂತ್ರವಾಗಿದ್ದು, ಇದರಲ್ಲಿ ಮುಸ್ಲಿಮರ ಅಂಗಡಿ, ಆಸ್ತಿ ಪಾಸ್ತಿಗಳನ್ನು ಗುರುತಿಸಿ ಬೆಂಕಿ ಹಚ್ಚಲಾಗಿದೆ. ಜನರಿಗೆ ಸುರಕ್ಷತೆ ಒದಗಿಸುವಲ್ಲಿ ಅಲ್ಲಿನ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಈ ವೈಫಲ್ಯವನ್ನು ತನಿಖೆ ಮಾಡಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಜರುಗಿಸುವ ನಿಟ್ಟಿನಲ್ಲಿ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಗಲಭೆ ಪೀಡಿತ ಪದೇಶಗಳ ಭೇಟಿಯ ನಂತರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗಣೇಶ ಮೆರವಣಿಗೆಯನ್ನು ಉದ್ದೇಶಪೂರ್ವಕವಾಗಿ ಮಸೀದಿಯ ಮುಂದೆ ನಿಲ್ಲಿಸಲಾಯಿತು. ಅದರಲ್ಲಿದ್ದ ಕೆಲವು ಕಿಡಿಗೇಡಿಗಳು ಪ್ರಚೋದನಕಾರಿ ಘೋಷಣೆಗಳನ್ನು ಕೂಗುವ ಮೂಲಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದ್ದಾರೆ. ನಂತರ ಮುಸ್ಲಿಮರ ಅಂಗಡಿಗಳನ್ನು ಗುರುತಿಸಿ ವ್ಯವಸ್ಥಿತವಾಗಿ ಬೆಂಕಿ ಹಚ್ಚಿದ್ದಾರೆ. ಇದರ ಹಿಂದೆ ಒಂದು ದೊಡ್ಡ ಪೂರ್ವಯೋಜಿತ ಷಡ್ಯಂತ್ರವಿದೆ. ಪೊಲೀಸ್ ಠಾಣೆಯ ಮುಂದಿನ ಅಂಗಡಿಗಳನ್ನು ಬೆಂಕಿ ಹಾಕಿ ಸುಡುವಾಗ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದಿದ್ದದ್ದು ಸಾಕಷ್ಟು ಅನುಮಾನಗಳಿಗೆ ಪುಷ್ಟಿ ನೀಡುತ್ತದೆ ಎಂದು ಮಜೀದ್ ಇದೇ ಸಂದರ್ಭದಲ್ಲಿ ಆರೋಪಿಸಿದರು.

- Advertisement -

ಗಲಭೆಯ ಆರೋಪದ ಮೇಲೆ ಮುಸ್ಲಿಮರ ಮನೆಗಳ ಬಾಗಿಲು ಮುರಿದು, ಮನೆಗಳಿಗೆ ನುಗ್ಗಿ, ಮಹಿಳೆಯರನ್ನು ಪುರುಷ ಪೊಲೀಸರು ತಳ್ಳಾಡಿ ಯುವಕರನ್ನು ಬಂಧಿಸಿದ್ದಾರೆ. ಗಲಭೆ ನಡೆದದ್ದು ಮುಸ್ಲಿಮರ ವಿರುದ್ಧ, ಸುಟ್ಟು ಹೋಗಿದ್ದು ಮುಸ್ಲಿಮರ ಅಂಗಡಿ, ಆಸ್ತಿಗಳು ಆದರೂ ಬಂಧನ ಮುಸ್ಲಿಮರದ್ದೇ ಆಗಿದೆ. ಇದು ಯಾವ ನ್ಯಾಯ ಎಂದು ಮಜೀದ್ ಅವರು ಬಂಧಿತ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಅಮಾಯಕರನ್ನು ಬಂಧಿಸಿದ್ದು ತಕ್ಷಣ ಅವರೆಲ್ಲರನ್ನೂ ಬಿಡುಗಡೆ ಮಾಡಬೇಕು ಎಂದು ಮಜೀದ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.



Join Whatsapp
Exit mobile version