ಹುಬ್ಬಳ್ಳಿ: ನನಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಹಿತೈಶಿಗಳು ಸೇರಿ ದಾವಣಗೆರೆಯಲ್ಲಿ ಅಮೃತ ಮಹೋತ್ಸವ ನಡೆಸಲು ತೀರ್ಮಾನಿಸಿದ್ದು. ಇದು ಸಿದ್ದರಾಮೋತ್ಸವ ಅಲ್ಲ, ಇಲ್ಲಿ ಶಕ್ತಿ ಪ್ರದರ್ಶನದ ವಿಷಯವೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
![ರಂಗೇರಿದ ಸಿದ್ದರಾಮಯ್ಯ ಅಮೃತ ಮಹೋತ್ಸವ](https://www.udayavani.com/wp-content/uploads/2022/08/Siddu-1-620x292.jpg)
ಇಂದು ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವದ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಇದು ನನ್ನ ಜೀವನದ ಇನ್ನೊಂದು ಮೈಲಿಗಲ್ಲು. ನಾನು ಮುಖ್ಯಮಂತ್ರಿಯಾಗಲು ಈ ಕಸರತ್ತು ಮಾಡುತ್ತಿದ್ದೇನೆ ಎಂಬುದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ.
ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗ ಇಂಡಿಯಾ ಶೈನಿಂಗ್ ಎಂದಿದ್ದರು. ಅದಾಗಿದೆಯೇ? ಈಗ ಪ್ರೆಧಾನಿ ಮೋದಿ ಅಚ್ಚೇ ದಿನ್ ಹೇಳುತ್ತಿದ್ದಾರೆ. ಅದೂ ನಡೆದಿದೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಸಹ ಮುಂದಿನ ವಿಧಾನಸಭಾ ಚುನಾವಣೆ ಸಂಬಂಧಿಸಿ 150 ಮಿಷನ್ ಕನಸು ಕಾಣುತ್ತಿದ್ದಾರೆ. ಆದರೆ, ಜನ ಚುನಾವಣೆ ಯಾವಾಗ ಎಂದು ಕಾಯುತ್ತಿದ್ದಾರೆ. ನಾಳೆಯೇ ಚುನಾವಣೆ ನಡೆದರೂ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರಾವಳಿಯಲ್ಲಿ ನಡೆದ ಸರಣಿ ಕೊಲೆಯಿಂದ ಬಿಜೆಪಿಯವರ ತಾರತಮ್ಯ ನೀತಿ ರಾಜ್ಯದ ಜನತೆಗೆ ಮನವರಿಕೆಯಾಗಿದೆ. ನಮ್ಮಲ್ಲಿ ಯಾವ ತಾರತಮ್ಯವೂ ಇಲ್ಲ , ಯಾವ ಬಣವೂ ಇಲ್ಲ. ಇರುವುದೊಂದೇ ಸೋನಿಯಾ ಗಾಂಧಿ ಬಣ ಎಂದು ಹೇಳಿದರು