ವಿಧಾನಸೌಧ: ದಕ್ಷಿಣ ಕನ್ನಡ ಅಭಿವೃದ್ಧಿ, ಮೀನುಗಾರರ ಸಮಸ್ಯೆಗಳ ಚರ್ಚೆ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳು, ಹಾಗೂ ಮೀನುಗಾರರ ಸಮಸ್ಯೆಗಳ ಕುರಿತಂತೆ ಬೆಂಗಳೂರಿನ ವಿಧಾನ ಸೌಧದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

- Advertisement -

ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಟಿಡಿಆರ್‌ ಬಳಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಯಾಂತ್ರೀಕೃತ ದೋಣಿಗಳಿಗೆ ಇದುವರೆಗೆ ವಾರ್ಷಿಕ ಮಿತಿ 1.50 ಲಕ್ಷ ಕಿಲೋ ಲೀಟರ್‌ ಕರ ರಹಿತ ಡೀಸಲ್‌ ಅನ್ನು ವಿತರಿಸಲಾಗುತ್ತಿತ್ತು, ಪ್ರಸ್ತುತ ಸಾಲಿನಿಂದ ಯಾಂತ್ರೀಕೃತ ದೋಣಿಗಳಿಗೆ ವಾರ್ಷಿಕ 1.50 ಲಕ್ಷ ಕಿಲೋ ಲೀಟರ್‌ನಿಂದ 2 ಲಕ್ಷ ಕಿಲೋ ಲೀಟರ್‌ ವರೆಗೆ ಹೆಚ್ಚಿಸಿ ಕರ ಡೀಸೆಲ್‌ ಅನ್ನು ವಿತರಿಸಿದ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಕೇಂದ್ರ ಸರಕಾರದಿಂದ ಪಡಿತರ ದರದ ಸೀಮೆ ಎಣ್ಣೆ ಅಗತ್ಯ ಪ್ರಮಾಣದಲ್ಲಿ ಮತ್ತು ಆವಶ್ಯಕತೆ ಇರುವ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತಿಲ್ಲದಿರುವುದರಿಂದ ರಾಜ್ಯ ಸರಕಾರವು ರಾಜ್ಯದ ಅನುದಾನದಲ್ಲಿ ನಾಡದೋಣಿ ಮಾಲಕರಿಗೆ ನಿರಂತರವಾಗಿ ಸೀಮೆಎಣ್ಣೆಯನ್ನು ಪೂರೈಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕ ಸೀಮೆ ಎಣ್ಣೆಯನ್ನು ಖರೀದಿಸಿ ನಾಡದೋಣಿ ಮಾಲಕರಿಗೆ ಸರಬರಾಜು ಮಾಡಲು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

- Advertisement -

ಕೈಗಾರಿಕೆ ಸೀಮೆಎಣ್ಣೆಯನ್ನು ಖರೀದಿಸುವ ನಾಡದೋಣಿ ಮಾಲಕರಿಗೆ ಪ್ರತಿ ಲೀಟರ್‌ಗೆ 35 ರೂ.ರಂತೆ ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು. ವಿವಿಧ ಕಾಮಗಾರಿಗಳಿಗೆ ಮೀನುಗಾರಿಕೆ ಬಂದರಿನ ವಾರ್ಫ್‌ ಮತ್ತು ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಕಾಮಗಾರಿ, ಉಳ್ಳಾಲ ಕೋಡಿಯಲ್ಲಿ ನಾಡದೋಣಿಗಳಿಗೆ ಜಟ್ಟಿ ನಿರ್ಮಾಣ ಮಾಡಲು 6.50 ಕೋಟಿ ರೂ. ಅನುದಾನದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಎನ್‌ಸಿಆರ್‌ಎಂಪಿ ಯೋಜನೆಯಡಿ ಅನುದಾನ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮೀನುಗಾರಿಕೆ ಇಲಾಖೆಯಿಂದ ಮೀನು ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿ ಹಿನ್ನೀರಿನಲ್ಲಿ 6,129 ಫಲ್ಗುಣಿ ನದಿ ಹಿನ್ನೀರಿನಲ್ಲಿ 5000 ಹಾಗೂ ಶಾಂಭವಿ ನದಿ ಹಿನ್ನೀರಿನಲ್ಲಿ 5000 ಸೀ ಬಾಸ್‌ ತಳಿಯ ಮೀನುಮರಿಗಳನ್ನು ಬಿತ್ತನೆ ಮಾಡಲಾಗಿದೆ ಎಂದು ಮಾಹಿತಿ ನೀಡಲಾಯಿತು.

ಸಭೆಯಲ್ಲಿ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್‌, ವಿಧಾನಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ, ಮನಪಾ ಸದಸ್ಯರಾದ ಎಸಿ ವಿನಯರಾಜ್‌, ಪ್ರವೀಣ್‌ಚಂದ್ರ ಆಳ್ವ, ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅತೀಕ್‌, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.



Join Whatsapp
Exit mobile version