Home ಕರಾವಳಿ ನೈಋತ್ಯ ರೈಲ್ವೆಯ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಶಿಲ್ಪಿ ಅಗರ್ವಾಲ್ ಅಧಿಕಾರ ಸ್ವೀಕಾರ

ನೈಋತ್ಯ ರೈಲ್ವೆಯ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಶಿಲ್ಪಿ ಅಗರ್ವಾಲ್ ಅಧಿಕಾರ ಸ್ವೀಕಾರ

ಮಂಗಳೂರು: ನೈಋತ್ಯ ರೈಲ್ವೆಯ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಶಿಲ್ಪಿ ಅಗರ್ವಾಲ್ ಅಧಿಕಾರ ಸ್ವೀಕರಿಸಿದ್ದಾರೆ.


ಶಿಲ್ಪಿ ಅಗರ್ವಾಲ್ ರವರು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ. ಅವರು ಶುಕ್ರವಾರ ರಾಹುಲ್ ಅಗರ್ವಾಲ್ ರವರಿಂದ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ಕು. ಅಗರ್ವಾಲ್ ರವರು ರೈಲ್ವೆ ಸಚಿವಾಲಯದ ನಿರ್ಮಾಣ ವಿಭಾಗವಾದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL)ನ ಯೋಜನೆಯ ಅನುಷ್ಠಾನ ಮತ್ತು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ (ಹಣಕಾಸು) ವಿಭಾಗದಲ್ಲಿ ಸಮೂಹ ಪ್ರಧಾನ ವ್ಯವಸ್ಥಾಪಕರಾಗಿದ್ದರು.


ಅಗರ್ವಾಲ್ ರವರು ಭಾರತೀಯ ರೈಲ್ವೆ ವಿತ್ತೀಯ ಸೇವೆಯ (IRAS) 1993 ರ ಬ್ಯಾಚ್’ಗೆ ಸೇರಿದವರು. ಅವರು ಲಕ್ನೋ ವಿಶ್ವವಿದ್ಯಾಲಯದಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅಗರ್ವಾಲ್ ರವರು ಭಾರತೀಯ ರೈಲ್ವೆಯಲ್ಲಿ ಸುಮಾರು ಮೂರು ದಶಕಗಳ ಅನುಭವವನ್ನು ಹೊಂದಿದ್ದು, ಉತ್ತರ ರೈಲ್ವೆ ಮತ್ತು ರೈಲ್ವೆ ಮಂಡಳಿಯ ಹಲವಾರು ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸುದೀರ್ಘ ಮತ್ತು ಉತ್ತಮ ವೃತ್ತಿಜೀವನದ ಅವಧಿಯಲ್ಲಿ ಅವರು, ಭಾರತೀಯ ರೈಲ್ವೆಯ ಬಹುತೇಕ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ನಿರ್ಮಾಣ, ಸಂಚಾರ, ಭಂಡಾರ, ಸಿಬ್ಬಂದಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿತ್ತೀಯ ಖಾತೆಯ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಇತ್ತೀಚಿನವರೆಗೂ ಅವರು ರೈಲ್ ವಿಕಾಸ್ ನಿಗಮ್ ಲಿಮಿಟೆಡ್’ನಲ್ಲಿ ಸಮೂಹ ಪ್ರಧಾನ ವ್ಯವಸ್ಥಾಪಕ (ಹಣಕಾಸು)ರಾಗಿದ್ದರು ಮತ್ತು ಉತ್ತರಾಖಂಡದ ಋಷಿಕೇಶ ಕರಣ್’ಪ್ರಯಾಗ ಯೋಜನೆ (ಚಾರ್ ಧಾಮ್ ಯೋಜನೆ) ನಂತಹ ಸಂಕೀರ್ಣ ಮೂಲಸೌಕರ್ಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ತಂಡಗಳಲ್ಲಿ ಅವಿಭಾಜ್ಯ ಅಂಗವಾಗಿದ್ದರು. ಅನೇಕ ಹಳಿ ದ್ವಿಪಥ ಮತ್ತು ರೈಲ್ವೆ ವಿದ್ಯುದ್ದೀಕರಣ ಯೋಜನೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯ ಜೊತೆಗೆ, ಅವರು RVNL ವ್ಯವಹಾರವನ್ನು ದೇಶದ ಹೊರಗೆ, ವಿಶೇಷವಾಗಿ ಮಾಲ್ಡೀವ್ಸ್ ನಲ್ಲಿ ವಿಸ್ತರಿಸುವಲ್ಲಿ ಪ್ರಮುಖರಾಗಿದ್ದರು.


2010 ರಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ರೈಲ್ವೆ ಸಚಿವರ ಪ್ರಶಸ್ತಿಗೆ ಭಾಜನರಾಗಿದ್ದ ಅಗರ್ವಾಲ್ ರವರು ಊಟಿಯಲ್ಲಿ ನಡೆಸಿದ ಅಂತಾರಾಷ್ಟ್ರೀಯ ಹಣಕಾಸು ವರದಿ ಮಾನದಂಡಗಳಲ್ಲಿ ವ್ಯಾಪಕ ತರಬೇತಿಯನ್ನು ಪಡೆದಿದ್ದಾರೆ. ಅಲ್ಲದೆ ಮಲೇಷ್ಯಾದ ICLIF ಸಂಸ್ಥೆಯಲ್ಲಿ ನಾಯಕತ್ವದ ವ್ಯವಹಾರ ನವೀನತೆ ಮತ್ತು ಸನ್ನಿವೇಶ ಕಾರ್ಯಕ್ರಮದಲ್ಲಿ, ಸಿಂಗಾಪುರದ INSEAD ಸಂಸ್ಥೆಯಲ್ಲಿ ಭಾರತೀಯ ರೈಲ್ವೆಯಲ್ಲಿ ಸುಧಾರಿತ ನಿರ್ವಹಣಾ ಕಾರ್ಯಕ್ರಮ ಗ್ರಾಹಕ ತಂತ್ರಗಳ ಮಾಡ್ಯೂಲ್’ನಲ್ಲಿ ಮತ್ತು ಲಂಡನ್ ಮತ್ತು ಪ್ಯಾರಿಸ್ನ ESCP (ಯುರೋಪ್ ಬ್ಯುಸಿನೆಸ್ ಸ್ಕೂಲ್)ನಲ್ಲಿ ಹಣಕಾಸು ಮತ್ತು ಖಾತೆಗಳ ತಾಂತ್ರಿಕ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಅವುಗಳ ಜೊತೆಗೆ ಫೆಬ್ರವರಿ 2019 ರಲ್ಲಿ ಲಕ್ನೋದ IIM ನಲ್ಲಿ ಹಣಕಾಸು ಕ್ಷೇತ್ರದಲ್ಲಿ MDP ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದ್ದಾರೆ ಎಂದು ಮೈಸೂರು ವಿಭಾಗ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version