Home ಟಾಪ್ ಸುದ್ದಿಗಳು ರೋಹಿತ್ ಚಕ್ರತೀರ್ಥನ ಪಠ್ಯದಲ್ಲಿ ಸಾವರ್ಕರ್ ಪವಾಡ: ನೆಟ್ಟಿಗರಿಂದ ಭಾರೀ ಟ್ರೋಲ್

ರೋಹಿತ್ ಚಕ್ರತೀರ್ಥನ ಪಠ್ಯದಲ್ಲಿ ಸಾವರ್ಕರ್ ಪವಾಡ: ನೆಟ್ಟಿಗರಿಂದ ಭಾರೀ ಟ್ರೋಲ್

ಹಕ್ಕಿಯ ರೆಕ್ಕೆಯ ಮೇಲೆ‌ ಕೂತು ತಾಯ್ನಾಡು ಸಂದರ್ಶಿಸುತ್ತಿದ್ದನಂತೆ ಸಾವರ್ಕರ್

ಬೆಂಗಳೂರು: ಸರ್ಕಾರ ವಿಸರ್ಜಿಸಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪರಿಷ್ಕರಿಸಿದ್ದ 8ನೇ ತರಗತಿ ಪಠ್ಯದಲ್ಲಿನ ಒಂದು ಭಾಗವು ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಭಾರೀ ಟ್ರೋಲ್ ಆಗುತ್ತಿದೆ.

8ನೇ ತರಗತಿ ‘ತಿಳಿ ಕನ್ನಡ’ ಪಠ್ಯಪುಸ್ತಕದಲ್ಲಿ ವಿ.ಡಿ. ಸಾವರ್ಕರನ್ನು ವೈಭವೀಕರಿಸಲಾಗಿದ್ದು, ಪವಾಡ ಪುರುಷನಂತೆ ಬಿಂಬಿಸಲಾಗಿದೆ. ಸಾವರ್ಕರ್ ಕುರಿತ ‘ಕಾಲವನ್ನು ಗೆದ್ದವರು’ ಎನ್ನುವ ಪ್ರವಾಸ ಕಥನದ ಒಂದು ಭಾಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ವ್ಯಂಗ್ಯಕ್ಕೀಡಾಗಿದೆ.

ಸಾವರ್ಕರ್ ಇದ್ದ ಅಂಡಮಾನ್ ಜೈಲಿಗೆ ಭೇಟಿ ನೀಡಿದ ಬಗ್ಗೆ ಬರೆದಿರುವ ಲೇಖಕ ಕೆ ಟಿ ಗಟ್ಟಿಯವರ ಪ್ರವಾಸ ಕಥನದಲ್ಲಿ, ಕೋಣೆಯೊಳಗಿನ ಹಿಂಬದಿ ಗೋಡೆಯ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ ಕಿಂಡಿ. ಸಾವರ್ಕರ್ ಕೋಣೆಯಲ್ಲಿ ಆ ಕಿಂಡಿ ಕೂಡ ಇಲ್ಲ. ಆದರೂ ಎಲ್ಲಿಂದಲೋ ಬುಲ್‌ಬುಲ್ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು ಎಂದು ಬರೆಯಲಾಗಿದೆ.

ಈ ಪ್ಯಾರಾ ಈಗ ಸೋಶಿಯಲ್ ಮೀಡಿಯಾಗಳಲ್ಲಿ ನಗೆಪಾಟಲಿಗೆ ಈಡಾಗಿದ್ದು, ಹೇಡಿ ಸಾವರ್ಕರ್‌ ಕುರಿತು 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಬರೆದ ಸುಳ್ಳಿನ ಕಥೆಗಳಲ್ಲಿ ಮಹಾನ್ ಸುಳ್ಳೊಂದು ಪತ್ತೆಯಾಗಿದೆ. ಅಂಡಮಾನ್ ಜೈಲಿನಿಂದ ಸಾವರ್ಕರ್ ಪ್ರತೀ ದಿನ ಬುಲ್ ಬುಲ್ ಹಕ್ಕಿಗಳ ಮೂಲಕ ಸೆಲ್‌ನಿಂದ ತಾಯ್ನಾಡಿಗೆ ಹೋಗಿ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದನಂತೆ. ಹಾಗಿದ್ದರೆ ಬ್ರಿಟಿಷರೊಂದಿಗೆ ಕ್ಷಮೆ ಕೇಳಿ ಬಿಡುಗಡೆಗೊಳ್ಳುವ ಅಗತ್ಯತೆ ಏನಿತ್ತು. ಬುಲ್ ಬುಲ್ ಹಕ್ಕಿಯ ರೆಕ್ಕೆಯ ಮೇಲೆ‌ ಕೂತು ಜೈಲಿನಿಂದ ಪಾರಾಗಬಹುದಿತ್ತಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ವಿಮರ್ಶಿಸಿ ರವಿ ಆನಂದ್ ಎಂಬುವವರು ಫೇಸ್ಬುಕ್ ಪೊಸ್ಟ್ ನಲ್ಲಿ, ಒಂದು ವೇಳೆ ಸಾವರ್ಕರ್ ಇಂದು ಬದುಕಿರುತ್ತಿದ್ದರೆ ಇದನ್ನು ಓದಿ ಎದ್ದು ಬಿದ್ದು ನಕ್ಕು ಸಾಯುತ್ತಿದ್ದ. ಎಳೆಯ ಮನಸ್ಸುಗಳಲ್ಲಿ ಸುಳ್ಳನ್ನು ಬಿತ್ತುತ್ತಿರುವ ಸರ್ಕಾರದ ನಡೆಯನ್ನು ವಿರೋಧಿಸುವವರಾರು? ಎಂದು ಹೇಳಿದ್ದಾರೆ.

Join Whatsapp
Exit mobile version