ಮಂಗಳೂರು: ವೀಳ್ಯದೆಲೆ ಮೂಲಕ ಜ್ಯೋತಿಷ್ಯವನ್ನು ಹೇಳಿ ಬಹುಮಾನ ಗೆಲ್ಲಿ ಎಂದು ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಜ್ಯೋತಿಷ್ಯರಿಗೆ ಸವಾಲು ಹಾಕಿದ್ದಾರೆ.
ಗತಕಾಲದ ಬಗ್ಗೆ ವೀಳ್ಯದೆಲೆ ಮೂಲಕ ಭವಿಷ್ಯ ನುಡಿಯುವ ಅತಿಮಾನುಷ ಶಕ್ತಿ ಹೊಂದಿರುವವರು ತಮ್ಮ ಸವಾಲನ್ನು ಎದುರಿಸಿ ಬಹುಮಾನವನ್ನು ಪಡೆದುಕೊಳ್ಳುವಂತೆ ಆಹ್ವಾನಿಸಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯ ಮೂಲಕ ಬಹಿರಂಗ ಸವಾಲು ಹಾಕಿರುವ ನರೇಂದ್ರ ನಾಯಕ್, ಮಳಲಿಯಲ್ಲಿ ವೀಳ್ಯದೆಲೆಯ ಮೂಲಕ ಹೇಳಿರುವ ಭವಿಷ್ಯವು ಊಹೆ ಅಥವಾ ಸ್ಥಿರ ಫಲಿತಾಂಶವಾಗಿರಬಹುದು. ಇಂತಹ ವ್ಯಕ್ತಿಗಳನ್ನು ಪರೀಕ್ಷಿಸಲು ನಾವು ಕೆಲವೊಂದು ನಿಖರವಾದ ವಿಧಾನಗಳನ್ನು ಅಳವಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.
![](https://prasthutha.com/wp-content/uploads/2022/05/284055439_10159213044268655_2648495415788938388_n-715x1024.jpg)
2022ರ ಮೇ 26 ರಂದು 11.33ಕ್ಕೆ ಆರು ಪ್ರತ್ಯೇಕ ಕವರ್ಗಳನ್ನು ಲಕೋಟೆಯೊಂದರಲ್ಲಿ ಸೀಲ್ ಮಾಡಲಾಗಿದ್ದು, ಅದನ್ನು ಜೂನ್ 1ರಂದು ನಗರದ ಪ್ರೆಸ್ಕ್ಲಬ್ನಲ್ಲಿ ಬೆಳಗ್ಗೆ 10.30ಕ್ಕೆ ತೆರೆದು ಅಲ್ಲಿಯೇ 1 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
![](https://prasthutha.com/wp-content/uploads/2022/05/283957701_10159213044463655_6986359620628203921_n-1024x827.jpg)
ಭವಿಷ್ಯ ಹೇಳುವವರು ಮುಚ್ಚಿದ ಆರು ಲಕೋಟೆಗಳಲ್ಲಿ ಏನಿದೆ ಎಂಬುದನ್ನು ನಿಖರವಾಗಿ ಹೇಳಬೇಕು. ಧಾರ್ಮಿಕ ನಂಬಿಕೆಗಳು, ಜಾತಿ, ಪಂಥ, ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಆಸಕ್ತರು ತಮ್ಮ ಉತ್ತರಗಳನ್ನು narenyen@gmail.comಗೆ ಇಮೇಲ್ ಅಥವಾ 9448216343 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಬಹುದು ಎಂದು ಹೇಳಿದ್ದಾರೆ.