ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯು ಗುಪ್ತಚರ ವೈಫಲ್ಯದ ಪರಿಣಾಮವಾಗಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬುಧವಾರ ಆರೋಪಿಸಿದ್ದಾರೆ.
ಉರಿ ಮತ್ತು ಪುಲ್ವಾಮಾದಲ್ಲಿ ನಡೆದ ಇದೇ ರೀತಿಯ ಘಟನೆಗಳಿಗಿಂತ ಈ ದಾಳಿ ಹೆಚ್ಚು ಅಪಾಯಕಾರಿ, ಖಂಡನೀಯ ಮತ್ತು ನೋವಿನಿಂದ ಕೂಡಿದೆ. ನರೇಂದ್ರ ಮೋದಿ ಸರ್ಕಾರವು ಈ ಘಟನೆಯ ಹೊಣೆ ಹೊರಬೇಕು ಎಂದು ಅವರು ಒತ್ತಾಯಿಸಿದರು.
ಇದು ನೋವಿನ ಘಟನೆ ಮತ್ತು ಇದೊಂದು ಹತ್ಯಾಕಾಂಡ. ಘಟನೆಯಲ್ಲಿ ಬಲಿಯಾದವರ ಕುಟುಂಬಗಳೊಂದಿಗೆ AIMIM ನಿಲ್ಲುತ್ತದೆ ಮತ್ತು ಗಾಯಗೊಂಡವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತದೆ ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯನ್ನು ತೀವ್ರವಾಗಿ ಖಂಡಿಸಿದರು ಮತ್ತು ಸರ್ಕಾರವು ಈ ಎಲ್ಲ ಭಯೋತ್ಪಾದಕರಿಗೆ ಪಾಠ ಕಲಿಸುತ್ತದೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಆದಷ್ಟು ಬೇಗ ನ್ಯಾಯ ಸಿಗುವಂತೆ ಮಾಡುತ್ತದೆ ಎಂದು ಆಶಿಸಿದರು.
‘ಪಹಲ್ಗಾಮ್ ನಲ್ಲಿ ಅವರ ಧರ್ಮವನ್ನು ಕೇಳಿದ ನಂತರ ಭಯೋತ್ಪಾದಕರು ಅಮಾಯಕ ಜನರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದಾರೆ. ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇನ್ನೊಂದು ಪ್ರಮುಖ ವಿಷಯವೆಂದರೆ ಇದು ಗುಪ್ತಚರ ವೈಫಲ್ಯವೂ ಆಗಿದೆ’ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಸರ್ಕಾರವು ತಮ್ಮ ಉಗ್ರ ಚಟುವಟಿಕೆಗಳ ತಡೆಗಟ್ಟುವಿಕೆ ನೀತಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ನೋಡಬೇಕು. ನೆರೆಯ ದೇಶದಿಂದ ಬಂದಿರುವ ಭಯೋತ್ಪಾದಕರ ಉದ್ದೇಶ ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುವುದು ಮತ್ತು ಅಮಾಯಕರನ್ನು ಕೊಲ್ಲುವುದಾಗಿದೆ ಎಂದು ಅವರು ಹೇಳಿದರು.