Home ಟಾಪ್ ಸುದ್ದಿಗಳು ರಾಷ್ಟ್ರದ ಭದ್ರತೆ, ಸಮಗ್ರತೆಗೆ ಮಾರಕವಾದ ದ್ವೇಷದ ಅಜೆಂಡಾದೊಂದಿಗೆ ಬಿಜೆಪಿ ಜನರನ್ನು ವಿಭಜಿಸುತ್ತಿದೆ: ಇಲ್ಯಾಸ್ ತುಂಬೆ

ರಾಷ್ಟ್ರದ ಭದ್ರತೆ, ಸಮಗ್ರತೆಗೆ ಮಾರಕವಾದ ದ್ವೇಷದ ಅಜೆಂಡಾದೊಂದಿಗೆ ಬಿಜೆಪಿ ಜನರನ್ನು ವಿಭಜಿಸುತ್ತಿದೆ: ಇಲ್ಯಾಸ್ ತುಂಬೆ

ನವದೆಹಲಿ : ಅಯೋಧ್ಯೆಯಲ್ಲಿ ರಾಮಮಂದಿರ ಎಂದು ಕರೆಯಲ್ಪಡುವುದನ್ನು ಬಾಬರಿ ಮಸೀದಿಯ ಭೂಮಿಯಲ್ಲಿ ನಿರ್ಮಿಸಲಾಗಿದೆ. 500 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಮಸೀದಿಯನ್ನು ಕೋಮುವಾದಿ ಗೂಂಡಾಗಳು ಧ್ವಂಸಗೊಳಿಸಿ ಅದನ್ನು ಕಬಳಿಸಿದ್ದಾರೆ. ಬಾಬರಿ ಮಸೀದಿ ಧ್ವಂಸ ಪ್ರಕರಣ ಸ್ವತಂತ್ರ ಭಾರತದ ಇತಿಹಾಸದ ಕಳಂಕಿತ, ನೋವಿನ ಮತ್ತು ನಾಚಿಕೆಗೇಡಿನ ಅಧ್ಯಾಯವಾಗಿದ್ದು, ಬಾಬರಿ ಮಸೀದಿ ಧ್ವಂಸದಿಂದಾಗಿ ಭುಗಿಲೆದ್ದ ಕೋಮು ಗಲಭೆಗಳಲ್ಲಿ ಸಾವಿರಾರು ಅಮಾಯಕ ಜೀವ ಕಳೆದುಕೊಂಡಿದ್ದರು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

ಬಾಬರಿ ಮಸೀದಿಯನ್ನು ನಿರ್ಮಿಸಲು ಯಾವುದೇ ದೇವಾಲಯವನ್ನು ದ್ವಂಸ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. 1949ರಲ್ಲಿ ಕತ್ತಲಲ್ಲಿ ಅತಿಕ್ರಮ ಪ್ರವೇಶ ಮಾಡಿ ಮಸೀದಿಯ ಆವರಣದಲ್ಲಿ ಅಕ್ರಮವಾಗಿ ವಿಗ್ರಹಗಳನ್ನು ಇಡಲಾಗಿತ್ತು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪುನರುಚ್ಚರಿಸಿದೆ. ಮಸೀದಿ ಧ್ವಂಸ ಕೃತ್ಯ ಅತ್ಯಂತ ಗಂಭೀರ ಅಪರಾಧ ಕೃತ್ಯ ಎಂದು ನ್ಯಾಯಾಲಯ ಹೇಳಿತು. ಆದಾಗ್ಯೂ, ಬಾಬರಿ ಮಸೀದಿಯ ಭೂಮಿಯನ್ನು ಸುಪ್ರೀಂ ಕೋರ್ಟ್ ರಾಮ್ ಮದಿರ್ ಟ್ರಸ್ಟ್‌ಗೆ ನೀಡಿತು. ಇದು ನ್ಯಾಯದ ಅಪಹಾಸ್ಯ ಮತ್ತು ತಾರತಮ್ಯದ ನೀತಿಯಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ನಾಚಿಕೆಗೇಡಿನ ಮತ್ತು ಕಳಂಕಿತ ಅಧ್ಯಾಯವಾಗಿದೆ ಎಂದು ಅವರು ಹೇಳಿದರು.

ಮಂದಿರದ ವಿಚಾರ ಮುಂದಿಟ್ಟು ವಿಭಜಕ ಅಜೆಂಡಾದೊಂದಿಗೆ ಬಿಜೆಪಿ ಜನರಲ್ಲಿ ದ್ವೇಷವನ್ನು ಹರಡುವ ಮೂಲಕ ಜನರನ್ನು ಕೋಮು ಧ್ರುವೀಕರಣಗೊಳಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ರಾಮಮಂದಿರ ಎಂದು ಕರೆಯಲ್ಪಡುವ ಕಟ್ಟಡದ ಉದ್ಘಾಟನೆ ಮತ್ತು ಇತರ ಕೋಮುವಾದಿ ವಿಚಾರಗಳ ಮೂಲಕ ಕೋಮು ಧ್ರುವೀಕರಣದ ಕಾರ್ಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿಯ ದ್ವೇಷ ರಾಜಕಾರಣ ಮತ್ತು ವಿಭಜಕ ಅಜೆಂಡಾ ಅತ್ಯಂತ ಅಪಾಯಕಾರಿಯಾಗಿದ್ದು, ಭಾರತದ ಪ್ರಜಾಪ್ರಭುತ್ವ, ಭದ್ರತೆ ಮತ್ತು ಸಮಗ್ರತೆಗೆ ವಿನಾಶಕಾರಿಯಾಗಿದೆ ಎಂದು ಇಲ್ಯಾಸ್ ತುಂಬೆ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version