Home ಟಾಪ್ ಸುದ್ದಿಗಳು ಕ್ರೈಸ್ತ ಮಿಷನರಿಗಳ ಮೇಲೆ ಮತಾಂತರದ ಆಧಾರರಹಿತ ಆರೋಪ, ಗೂಳಿಹಟ್ಟಿ ಸುಳ್ಳುಹೇಳಿಕೆ ಖಂಡನೀಯ: ಎಸ್ ಡಿಪಿಐ

ಕ್ರೈಸ್ತ ಮಿಷನರಿಗಳ ಮೇಲೆ ಮತಾಂತರದ ಆಧಾರರಹಿತ ಆರೋಪ, ಗೂಳಿಹಟ್ಟಿ ಸುಳ್ಳುಹೇಳಿಕೆ ಖಂಡನೀಯ: ಎಸ್ ಡಿಪಿಐ

ಬೆಂಗಳೂರು: ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು “ಕ್ರೈಸ್ತ ಮಿಷನರಿಗಳು ರಾಜ್ಯದಲ್ಲಿ ವ್ಯಾಪಕವಾಗಿ ಮತಾಂತರ ಮಾಡುತ್ತಿದ್ದಾರೆ, ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ಹಾಕುತ್ತಾರೆ” ಎಂದು ಆಧಾರ ರಹಿತ ಆರೋಪ ನಡೆಸಿ ಸದನವನ್ನು ದಾರಿ ತಪ್ಪಿಸುವುದರೊಂದಿಗೆ ಇಡೀ ಕ್ರೈಸ್ತ ಸಮುದಾಯವನ್ನೇ ಗುರಿಯಾಗಿಸಿಕೊಂಡು ಅವಮಾಸಿರುವುದನ್ನು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತೀವ್ರವಾಗಿ ಖಂಡಿಸಿದ್ದಾರೆ.


ಮತಾಂತರದ ಹೆಸರನ್ನು ಹೇಳಿ ಸಂಘಪರಿವಾರ ಸಂಘಟನೆಗಳು ಕಳೆದ ಹಲವಾರು ವರ್ಷಗಳಿಂದ ಕ್ರೈಸ್ತರ ಧಾರ್ಮಿಕ ಕೇಂದ್ರಗಳು, ಧರ್ಮಗುರುಗಳು ಮತ್ತು ಭಕ್ತಾದಿಗಳ ಮೇಲೆ ದಾಳಿ ಮಾಡುವುದು, ಆಸ್ತಿಪಾಸ್ತಿಗಳನ್ನು ನಾಶ ಮಾಡುವುದು ಎಗ್ಗಿಲ್ಲದೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಇಂತಹ ಕೋಮುವಾದಿ ಸಂಘಟನೆಗಳ ಸುಳ್ಳು ವರದಿಗಳನ್ನು ಆಧಾರವಾಗಿಟ್ಟುಕೊಂಡು ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನ ಸೌಧದ ಅಧಿವೇಶನದಲ್ಲಿ ಕ್ರೈಸ್ತ ಜಾನಾಂಗವನ್ನೇ ಗುರಿಮಾಡಿಕೊಂಡು ಗೂಳಿಹಟ್ಟಿ ಶೇಖರ್ ಸದನದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.


ಯಾವುದೇ ಆಸೆ,ಆಮಿಷ, ಒತ್ತಡಗಳಿಲ್ಲದೆ ಸ್ವಯಂಪ್ರೇರಿತವಾಗಿ ಯಾವುದೇ ಧರ್ಮವನ್ನು ಅನುಸರಿಸುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನದ ನೀಡಿರುವಾಗ, ಈ ಹಕ್ಕನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ಮತಾಂತರ ಕಾಯ್ದೆಗೆ ತಿದ್ದುಪಡಿಯನ್ನು ತರುವ ಸಂಘಪರಿವಾರದ ಹುನ್ನಾರ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.

Join Whatsapp
Exit mobile version