Home ಟಾಪ್ ಸುದ್ದಿಗಳು ಯಡಿಯೂರಪ್ಪ ಆರು ಬ್ಯಾಗ್‌ಗಳೊಂದಿಗೆ ದೆಹಲಿಗೆ: ಕುಮಾರಸ್ವಾಮಿ ಆರೋಪ

ಯಡಿಯೂರಪ್ಪ ಆರು ಬ್ಯಾಗ್‌ಗಳೊಂದಿಗೆ ದೆಹಲಿಗೆ: ಕುಮಾರಸ್ವಾಮಿ ಆರೋಪ

ಬೆಂಗಳೂರು: ವಿಶೇಷ ವಿಮಾನದಲ್ಲಿ ಪುತ್ರರೊಂದಿಗೆ ದೆಹಲಿಗೆ ತೆರಳಿದ ಯಡಿಯೂರಪ್ಪ ಆರು ದೊಡ್ಡ ದೊಡ್ಡ ಬ್ಯಾಗ್ ಗಳನ್ನು ಹಿಡಿದುಕೊಂಡು ಹೋಗಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿಷಯಗಳನ್ನು ಆರು ಬ್ಯಾಗ್ ನಲ್ಲಿ ಹಾಕಿದ್ದರೋ, ಅಥವಾ ಅದರಲ್ಲಿ ಬೇರೆ ಏನಿತ್ತು ಎನ್ನುವುದು ಗೊತ್ತಿಲ್ಲ. ನಿನ್ನೆ ಪ್ರಧಾನಿಯವರನ್ನು ಭೇಟಿ ಮಾಡಲು ಹೋದಾಗ ಆರು ಬ್ಯಾಗ್ ಗಳು ಇದ್ದವು. ಅದರ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.

ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿ ಪ್ರಧಾನಿಗಳು, ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಎಷ್ಟು ಗೌರವ ಸಲ್ಲಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಹಲವೆಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ. ವೈಯಕ್ತಿಕವಾಗಿ ನನ್ನ ಮತ್ತು ಪಕ್ಷದ ಬೆಂಬಲವಿದೆ ಎಂದರು.

Join Whatsapp
Exit mobile version