ನವದೆಹಲಿ: ಕೃಷ್ಣ ಮೆನನ್ ಮಾರ್ಗದ ಅಧಿಕೃತ ಬಂಗಲೆಯನ್ನು ಶೀಘ್ರದಲ್ಲೇ ತೆರವುಗೊಳಿಸುವುದಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸೋಮವಾರ ಹೇಳಿದ್ದಾರೆ.
ನಿಗದಿತ ಅವಧಿ ಮುಗಿದರೂ ಚಂದ್ರಚೂಡ್ ಅವರು ಬಂಗಲೆಯನ್ನು ತೆರವುಗೊಳಿಸದೇ ಇದ್ದುದು ವಿವಾದಕ್ಕೆ ಕಾರಣವಾಗಿತ್ತು. ಬಂಗಲೆ ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಅವರ ಹೇಳಿಕೆ ಹೊರಬಿದ್ದಿದೆ.
ಚಂದ್ರಚೂಡ್ ಅವರು ಪತ್ನಿ ಕಲ್ಪನಾ ಹಾಗೂ ಪುತ್ರಿಯರಾದ ಪ್ರಿಯಾಂಕಾ ಹಾಗೂ ಮಾಹಿ ಅವರ ಜೊತೆ ಸಿಜೆಐಗೆ ಮೀಸಲಿಟ್ಟ ಕೃಷ್ಣ ಮೆನನ್ ಮಾರ್ಗದ ಬಂಗಲೆ ಸಂಖ್ಯೆ 5ರಲ್ಲಿ ವಾಸಿಸುತ್ತಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪತ್ರ ಬರೆದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಚಂದ್ರಚೂಡ್, ‘ಮನೆ ತೆರವು ಮಾಡಲು ನಾವು ಸಾಮಾನು ಸರಂಜಾಮುಗಳನ್ನು ಸಿದ್ಧವಾಗಿ ಇಟ್ಟುಕೊಂಡಿದ್ದೇವೆ. ಕೆಲವು ಸಾಮಾನುಗಳನ್ನು ಈಗಾಗಲೇ ಹೊಸ ಮನೆಗೆ ಸ್ಥಳಾಂತರಿಸಿದ್ದೇವೆ’ ಎಂದು ಹೇಳಿದ್ದಾರೆ.
ಮನೆ ತೆರವು ಮಾಡದೇ ಇರುವುದು ವಿವಾದದ ರೂಪ ಪಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ತಮ್ಮ ಇಬ್ಬರು ಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವುದು ತೆರವು ಪ್ರಕ್ರಿಯೆ ತಡವಾಗಲು ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಮಕ್ಕಳಿಗೆ ಗಾಲಿಕುರ್ಚಿಯಲ್ಲಿ ಓಡಾಟ ನಡೆಸಲು ಅನುಕೂಲ ಹೊಂದಿರುವ ಮನೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
