Home ಟಾಪ್ ಸುದ್ದಿಗಳು ‘ನೋಟ್ ಬಂಧಿ’ ಎಂಬ ಮೋದಿಯ ಐತಿಹಾಸಿಕ ಪ್ರಮಾದಕ್ಕೆ ಇಂದು ಆರನೇ ವರ್ಷದ ಸೂತಕ ದಿನ: ದಿನೇಶ್...

‘ನೋಟ್ ಬಂಧಿ’ ಎಂಬ ಮೋದಿಯ ಐತಿಹಾಸಿಕ ಪ್ರಮಾದಕ್ಕೆ ಇಂದು ಆರನೇ ವರ್ಷದ ಸೂತಕ ದಿನ: ದಿನೇಶ್ ಗುಂಡೂರಾವ್

►ಪ್ರಚಾರಕ್ಕಾಗಿ ಮಾಡಿದ ನೋಟ್ ಬಂಧಿ ನಿರ್ಧಾರದಿಂದ ಎಷ್ಟು ಮನೆಯ ದೀಪ ಆರಿ ಹೋಯ್ತು ಎಂಬ ಅರಿವು ನಿಮಗಿದೆಯೇ?


►ನೋಟ್ ಬಂಧಿ ನನ್ನ ದೊಡ್ಡ ಸಾಧನೆ ಎಂದು ಮೋದಿಗೆ ಭಾಷಣ ಬಿಗಿಯಲು ಧೈರ್ಯ ಮತ್ತು ನೈತಿಕತೆ ಇದೆಯೆ?


►ನೋಟ್ ಬಂಧಿ ವೈಫಲ್ಯಕ್ಕೆ ಎಂದಾದರೂ ಮೋದಿ ಪ್ರಾಯಶ್ಚಿತ್ತ ಪಟ್ಟರೆ?


ಬೆಂಗಳೂರು: ‘ನೋಟ್ ಬಂಧಿ’ ಎಂಬ ಮೋದಿಯವರ ಐತಿಹಾಸಿಕ ಪ್ರಮಾದಕ್ಕೆ ಇಂದು ಆರನೇ ವರ್ಷದ ಸೂತಕ ದಿನ. ಮೋದಿಯವರೆ, ನೋಟ್ ಬಂಧಿ ಎಂಬ ನಿಮ್ಮ ಎಡಬಿಡಂಗಿ ನಿರ್ಧಾರ ಮಾಡಿದ ಎಡವಟ್ಟು ನಿಮಗೆ ಗೊತ್ತಿದೆಯೆ? ಕೇವಲ ಪ್ರಚಾರಕ್ಕಾಗಿ ಮಾಡಿದ ನೋಟ್ ಬಂಧಿ ನಿರ್ಧಾರದಿಂದ ಎಷ್ಟು ಮನೆಯ ದೀಪ ಆರಿ ಹೋಯ್ತು ಎಂಬ ಅರಿವು ನಿಮಗಿದೆಯೇ? ನೋಟ್ ಬಂಧಿಯಿಂದ ಯಾರ ಉದ್ಧಾರವಾಯಿತು? ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮೋದಿಯವರ ‘ನೋಟ್ ಬಂಧಿ’ಯಿಂದ ಬೀದಿ ವ್ಯಾಪಾರಿಗಳು ಬೀದಿಗೆ ಬಿದ್ದರು, ಬಡವರು ಸರ್ವನಾಶವಾದರು, ಭಾರತದ ಆರ್ಥಿಕತೆ ಪಾತಾಳ ಸೇರಿತು. ಜನರ ನೆಮ್ಮದಿ ಗುಡಿಸಿ ಗುಂಡಾಂತರವಾಯಿತು. ನೋಟ್ ಬಂಧಿ ತನ್ನ ಆಡಳಿತದ ದೊಡ್ಡ ಸಾಧನೆ ಎಂದು ಮೋದಿಯವರಿಗೆ ಭಾಷಣ ಬಿಗಿಯಲು ಧೈರ್ಯ ಮತ್ತು ನೈತಿಕತೆ ಇದೆಯೆ? ಯಾಕೆ ನೋಟ್ ಬಂಧಿ ಬಗ್ಗೆ ಮೋದಿ ಮಾತಾಡುವುದಿಲ್ಲ? ಎಂದು ಕುಟುಕಿದ್ದಾರೆ.


‘ನೋಟ್ ಬಂಧಿ’ ಯಿಂದ ಕಪ್ಪು ಹಣ ತರುತ್ತೇವೆ ಎಂದಿದ್ದರು ಮೋದಿ. ಆ ಕಪ್ಪು ಹಣ ಬಂತೆ? ನೋಟ್ ಬಂಧಿಯಿಂದ ದೇಶ ಉದ್ಧಾರವಾಗುತ್ತೆ ಎಂದಿದ್ದರು ಮೋದಿ. ದೇಶ ಉದ್ಧಾರವಾಯಿತೆ? 50 ದಿನ ಅವಕಾಶ ಕೊಡಿ ಇಲ್ಲದಿದ್ದರೆ ನನ್ನನ್ನು ಸುಟ್ಟುಬಿಡಿ ಎಂದಿದ್ದರು ಮೋದಿ. ನೋಟ್ ಬಂಧಿ ವೈಫಲ್ಯಕ್ಕೆ ಎಂದಾದರೂ ಮೋದಿಯವರು ಪ್ರಾಯಶ್ಚಿತ್ತ ಪಟ್ಟರೆ? ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version