Home ಕರಾವಳಿ ಮಂಗಳೂರು : ಖಾಸಗಿ ಬಸ್ಸನ್ನು ತಡೆದು ಸಂಘಪರಿವಾರದ ಕಾರ್ಯಕರ್ತರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ !

ಮಂಗಳೂರು : ಖಾಸಗಿ ಬಸ್ಸನ್ನು ತಡೆದು ಸಂಘಪರಿವಾರದ ಕಾರ್ಯಕರ್ತರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ !

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

►ಜಿಲ್ಲೆಯಲ್ಲಿ ಮುಂದುವರಿದ ಅನೈತಿಕ ಪೊಲೀಸ್ ಗಿರಿ !

ಮಂಗಳೂರು : ಬೆಂಗಳೂರಿಗೆ ತೆರಳುತ್ತಿದ್ದ ಯುವಕನೊಬ್ಬನನ್ನು ಬಸ್ಸಿನಿಂದ ಕೆಳಗೆ ಎಳೆದುಹಾಕಿ ಸಂಘಪರಿವಾರದ ಕಾರ್ಯಕರ್ತರು ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ ಮಂಗಳೂರಿನ ಪಂಪ್ ವೆಲ್ ಬಳಿ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಬೈಕಂಪಾಡಿ-ಜೋಕಟ್ಟೆ ನಿವಾಸಿ ಅಸ್ವಿದ್ ಅನ್ವರ್ ಮುಹಮ್ಮದ್ (24) ಎಂದು ಗುರುತಿಸಲಾಗಿದೆ. ಯುವಕ ಕೆಲಸದ ನಿಮಿತ್ತ ಕಳೆದ ರಾತ್ರಿ 9.30ರ ಸುಮಾರಿಗೆ ಖಾಸಗಿ ಬಸ್ ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ. ಬಸ್, ಪಂಪ್ ವೆಲ್ ಬಳಿ ತಲುಪಿದಾಗ ನಾಲ್ಕೈದು ಮಂದಿಯಿದ್ದ ತಂಡ ಬಸ್ಸಿಗೆ ಹತ್ತಿ ಯುವಕನ ಮೇಲೆ ಹಲ್ಲೆ ನಡೆಸಿದೆ. ಬಳಿಕ ಬಸ್ ನಿಂದ ಆತನನ್ನು ಕೆಳಗೆ ಎಳೆದೊಯ್ದು ತೀವ್ರವಾಗಿ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಸ್ ನಲ್ಲಿದ್ದ ಪ್ರಯಾಣಿಕರಾಗಲೀ, ಚಾಲಕ, ನಿರ್ವಾಹಕರಾಗಲೀ ಯುವಕನ ರಕ್ಷಣೆಗೆ ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಯುವಕನ ಸಮೀಪದ ಸೀಟಿನಲ್ಲಿ ಕುಳಿತಿದ್ದ ಯುವತಿಯನ್ನು ವಿಚಾರಣೆ ನಡೆಸಿ ಆಕೆಯ ಪೋಷಕರೊಟ್ಟಿಗೆ ಕಳುಹಿಸಲಾಗಿದೆ.

ವಿಷಯ ತಿಳಿದ ತಕ್ಷಣ ಕಂಕನಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಹಲ್ಲೆ ನಡೆಸಿದ ತಂಡ ಪರಾರಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗೆ ಕರಾವಳಿ ಜಿಲ್ಲೆಗಳಲ್ಲಿ ಸಂಘಪರಿವಾರದ ನೈತಿಕ ಪೊಲೀಸ್ ಗಿರಿ ಹಾಗೂ ಪುಂಡಾಟಿಕೆ ಹೆಚ್ಚಾಗುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ಸ್ಥಳೀಯ ಪ್ರಯಾಣದ ಬಸ್ ಗಳಲ್ಲಿ ನೈತಿಕ ಪೊಲೀಸ್ ಗಿರಿ ಹಿಂದಿನಿಂದಲೂ ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದೂರ ಪ್ರಯಾಣದ ಬಸ್ ಗಳನ್ನು ಗುರಿಯಾಗಿಸಿ ಜೋಡಿಗಳ ಮೇಲೆ ಹಲ್ಲೆ ನಡೆಸುವ ಘಟನೆಗಳು ಹೆಚ್ಚಾಗಿವೆ.ಇತ್ತೀಚೆಗೆ ಭಿನ್ನ ಸಮುದಾಯದ ವೃತ್ತಿಪರರು ಜೊತೆಯಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಅನೈತಿಕ ಪೊಲೀಸರು ದಾಳಿ ನಡೆಸಿ ಜೋಡಿಯನ್ನು ಬಸ್ ನಿಂದ ಕೆಳಗಿಳಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿತ್ತು. ಅದೇ ರೀತಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ಯುವಕ-ಯುವತಿ ಮಂಗಳೂರಿನಿಂದ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು. ಸಂಘಪರಿವಾರದ ಗೂಂಡಾಗಳು ಬಸ್ಸನ್ನು ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ನಿಲ್ಲಿಸಿ ಜೋಡಿಯನ್ನು ಕೆಳಗೆ ಇಳಿಸಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದರು.

Join Whatsapp
Exit mobile version