ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣ: ಇಬ್ಬರ ಬಂಧನ

Prasthutha|

ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೂರ್ಣಚಂದ್ರ ಮತ್ತು ಅರುಣ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಗಾಗಿ ರಚನೆಯಾಗಿರುವ ವಿಶೇಷ ತಂಡ ತನ್ನ ಕಾರ್ಯವನ್ನು ಚುರುಕುಗೊಳಿಸಿದೆ.

- Advertisement -

ನಿನ್ನೆ ಸಂಜೆ ಬೈಕ್‌ನಲ್ಲಿ ತೆರಳುತ್ತಿದ್ದ ಪ್ರಶಾಂತ್‌ನನ್ನು ಆಟೋದಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಬೆಸ್ತರ ಬೀದಿಯ ಪೂರ್ಣಚಂದ್ರ ಹಾಗೂ ಸ್ನೇಹಿತರು ಸೇರಿ ಪತಿಯನ್ನು ಕೊಲೆ ಮಾಡಿದ್ದಾರೆ. ಹಳದಿ ಬಣ್ಣದ ಟಾಪ್ ಹೊಂದಿದ್ದ ಕೆಎ-46-6388 ಪ್ಯಾಸೆಂಜರ್ ಆಟೋದಲ್ಲಿ ಹಿಂಬಾಲಿಸಿ ಬಂದು ಹತ್ಯೆ ಮಾಡಿದ್ದಾರೆ. ಕೊಲೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಶಾಂತ್ ಪತ್ನಿ ಸೌಮ್ಯ ಪೆನ್‌ಶೆನ್ ಮೊಹಲ್ಲಾ ಠಾಣೆಗೆ ದೂರು ನೀಡಿದ್ದರು.

ಕೆರೆಯಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದ ಬಂಧಿತ ಆರೋಪಿ ಪೂರ್ಣಚಂದ್ರ ಮತ್ತು ಕೊಲೆಯಾದ ಪ್ರಶಾಂತ್ ನಡುವೆ ಸೈಟ್ ಮಾರಾಟ ಸೇರಿದಂತೆ ಕೆಲ ವಿಚಾರಗಳಲ್ಲಿ ವೈಮನಸ್ಸು ಮೂಡಿತ್ತು . ಬಳಿಕ ಕೆಲವರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಸಹ ನಡೆದಿತ್ತು ಎನ್ನಲಾಗಿದೆ. ಆದರೂ ಹಗೆತನ ಬಿಡದ ಪೂರ್ಣಚಂದ್ರ, ಪ್ರಶಾಂತ್‌ನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ವಾರಗಟ್ಟಲೆ ಆತನ ಚಲನವಲನ ವೀಕ್ಷಣೆ ಮಾಡಿ ನಿನ್ನೆ ಸಂಜೆ ಒಂಟಿಯಾಗಿ ಮನೆ ಕಡೆಗೆ ಹೋಗುವಾಗ ಜವೇನಹಳ್ಳಿ ಮಠದ ರಸ್ತೆಯಲ್ಲಿ ಯಾರು ಇಲ್ಲದ ವೇಳೆ ಪ್ರಶಾಂತ್ ಬೈಕ್ ಅಡ್ಡಗಟ್ಟಿ ತನ್ನ ಸಹಚರರೊಂದಿಗೆ ಕೊಲೆಮಾಡಿದ್ದ. ಇದೀಗ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಉಳಿದವರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Join Whatsapp
Exit mobile version