ನವದೆಹಲಿ: ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ‘ಕೇವಲ ಕವಿತೆ ವಾಚನ, ಹಾಸ್ಯ, ಯಾವುದೇ ರೀತಿಯ ಕಲೆ ಅಥವಾ ಮನರಂಜನೆಯು ಸಮುದಾಯಗಳ ನಡುವೆ ದ್ವೇಷ ಬಿತ್ತಲು ಕಾರಣವಾಗುತ್ತದೆ ಎನ್ನಲಾಗದು’ ಎಂದು ಹೇಳಿದೆ.
ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪಗಢಿ ವಿರುದ್ಧದ ಎಫ್ ಐಆರ್ ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ವಲ್ ಭುಯಾಂ ಅವರ ಪೀಠವು, ‘ಕಾವ್ಯ, ನಾಟಕ, ಚಲನಚಿತ್ರ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿ, ವಿಡಂಬನ ಸಾಹಿತ್ಯ ಹಾಗೂ ಕಲೆ ಸೇರಿದಂತೆ ವೇದಿಕೆ ಕಾರ್ಯಕ್ರಮಗಳು ಮಾನವನ ಜೀವನವನ್ನು ಹೆಚ್ಚು ಅರ್ಥಪೂರ್ಣವನ್ನಾಗಿಸಿದೆ’ ಎಂದು ಹೇಳಿತು.
‘ಯೆ ಖೂನ್ ಸೆ ಪ್ಯಾಸೆ ಬಾತ್ ಸುನೋ…’ ಎಂಬ ಕವಿತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಗುಜರಾತ್ ನ ಜಾಮ್ ನಗರದಲ್ಲಿ ಇಮ್ರಾನ್ ವಿರುದ್ಧ ಜನವರಿ 3ರಂದು ಪ್ರಕರಣ ದಾಖಲಾಗಿತ್ತು.
ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಗುಜರಾತ್ ಹೈಕೋರ್ಟ್ ನ ಜ.17ರ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು, ‘ಈ ಕವಿತೆಗೆ ಯಾವುದೇ ಧರ್ಮ, ಜಾತಿ, ಸಮುದಾಯ ಅಥವಾ ನಿರ್ದಿಷ್ಟ ಗುಂಪಿನ ಜತೆ ಸಂಬಂಧವಿಲ್ಲ’ ಎಂದು ಹೇಳಿತು.