Home ಟಾಪ್ ಸುದ್ದಿಗಳು ರಾಷ್ಟ್ರಪತಿ ಟ್ವೀಟ್: ಕಂಗನಾಳನ್ನು ಮೀರಿಸಿದ ಹಾಜಬ್ಬ..!

ರಾಷ್ಟ್ರಪತಿ ಟ್ವೀಟ್: ಕಂಗನಾಳನ್ನು ಮೀರಿಸಿದ ಹಾಜಬ್ಬ..!

ನವದೆಹಲಿ: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಮುಂದೂಡಲ್ಪಟ್ಟಿದ್ದ ಪದ್ಮ ಪುರಸ್ಕಾರ ಸಮಾರಂಭದ ಮೊದಲ ದಿನ ರಾಷ್ಟ್ರಪತಿ ಭವನದಲ್ಲಿ ಸೋಮವಾರ 73 ಗಣ್ಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಹರೇಕಳ ಹಾಜಬ್ಬ, ತುಳಸಿ ಗೌಡ ಹಾಗೂ ವಿದುಷಿ ಜಯಲಕ್ಷ್ಮೀ ಸೇರಿದಂತೆ ಒಟ್ಟು 8 ಕನ್ನಡಿಗರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದವರಲ್ಲಿ ಪಾದರಕ್ಷೆ ಧರಿಸದೆ ಸಾಮಾನ್ಯ ಧಿರಿಸಿನಲ್ಲಿ ವಿನಯದಿಂದ ಪ್ರಶಸ್ತಿ ಸ್ವೀಕರಿಸಲು ಬಂದ ಹರೇಕಳ ಹಾಜಬ್ಬರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್’ರವರು ತದೇಕಚಿತ್ತದಿಂದ ಕೆಲಕಾಲ ವೀಕ್ಷಿಸಿದ್ದರು. ಪ್ರಶಸ್ತಿ ಪ್ರಧಾನ ಸಮಾರಂಭದ ಬಳಿಕ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿ ಅವರ ಜೊತೆಗಿನ ಫೋಟೋಗಳನ್ನು ರಾಷ್ಟ್ರಪತಿಯವರ ಕಾರ್ಯಾಲಯ ಟ್ವಿಟರ್’ನಲ್ಲಿ ಹಂಚಿಕೊಂಡಿತ್ತು.

ವಿಶೇಷವೆಂದರೆ ರಾಷ್ಟ್ರಪತಿಯವರು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ ಪದ್ಮ ಪುರಸ್ಕೃತರ ಫೋಟೋಗಳಲ್ಲಿ ಹರೇಕಳ ಹಾಜಬ್ಬ ರವರ ಫೋಟೋ ಅತೀ ಹೆಚ್ಚು ಲೈಕ್’ಗಳನ್ನು ಪಡೆದಿದೆ. ನಟಿ ಕಂಗನಾ ರಣಾವತ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಬಾಕ್ಸಿಂಗ್ ಲೆಜಂಡ್ ಮೇರಿ ಕೋಮ್’ರಂತಹ ಸೆಲೆಬ್ರಿಟಿಗಳನ್ನು ಹಾಜಬ್ಬ ರಾಷ್ಟ್ರಪತಿಯವರ ಪೋಸ್ಟ್’ನಲ್ಲಿ ಹಿಂದಿಕ್ಕಿದ್ದಾರೆ.  

ಕಿತ್ತಳೆ ಮಾರಾಟ ಮಾಡಿ ಉಳಿಸಿದ ಹಣದಿಂದ ತನ್ನ ಗ್ರಾಮದಲ್ಲಿ ಶಾಲೆ ಕಟ್ಟಿದ ಶ್ರೀ ಹರೇಕಳ ಹಾಜಬ್ಬ ಎಂದು ಬರೆದು ಹಾಜಬ್ಬಾರಿಗೆ ಪ್ರಶಸ್ತಿ ನೀಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಈ ಫೋಟೋವನ್ನು 67 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 9 ಸಾವಿರಕ್ಕೂ ಅಧೀಕ ಮಂದಿ ರಿಟ್ವೀಟ್ ಮಾಡಿದ್ದಾರೆ.

ವಿಶೇಷವೆಂದರೆ ಬಾಲಿವುಡ್’ನ ಸೆಲೆಬ್ರಿಟಿ ಕಂಗನಾ ರಣಾವತ್ ಫೋಟೋಗೆ 51 ಸಾವಿರ ಲೈಕ್’ಗಳಷ್ಟೇ ಲಭಿಸಿದೆ. ಪದ್ಮಶ್ರೀ ಪುರಸ್ಕೃತ ಮತ್ತೋರ್ವ ಕನ್ನಡತಿ ಕನ್ನಡತಿ ತುಳಸಿ ಗೌಡ ಅವರ ಫೋಟೋಗೆ 42 ಸಾವಿರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಟ್ಲರ್ ಸಿಂಧು ಫೋಟೋಗೆ 30 ಸಾವಿರ ಹಾಗೂ ಅನಾಥ ಶವಗಳಿಗೆ ಗೌರವಯುತ ಅಂತಿಮ ಸಂಸ್ಕಾರ ನಡೆಸುತ್ತಿರುವ ಮೊಹಮ್ಮದ್ ಷರೀಫ್ ಅವರ ಫೋಟೋಗೆ 32 ಸಾವಿರ ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version