Home ಟಾಪ್ ಸುದ್ದಿಗಳು ಕೊಲಂಬೋ ಬೀದಿಯಲ್ಲಿ ಆಕ್ರೋಶ ಸ್ಫೋಟ; ಕಾದು ನೋಡುವ ನಡೆ ಅನುಸರಿಸಿದ ಭಾರತ

ಕೊಲಂಬೋ ಬೀದಿಯಲ್ಲಿ ಆಕ್ರೋಶ ಸ್ಫೋಟ; ಕಾದು ನೋಡುವ ನಡೆ ಅನುಸರಿಸಿದ ಭಾರತ

ಕೊಲಂಬೋ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದಾಗಿ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಶ್ರೀಲಂಕಾ ಅಧ್ಯಕ್ಷರ ನಿವಾಸದಿಂದ ಒಂದು ಕಿಲೋಮೀಟರ್ ದೂರದಲ್ಲಿ ಭಾರತೀಯ ದೂತಾವಾಸ ಕಚೇರಿಯಿದೆ.

ಈಗಿನ ಒಂದು ಮಟ್ಟಿಗೆ ಅಧ್ಯಕ್ಷರೇ ಇಲ್ಲದ ಸ್ಥಿತಿಯನ್ನು ಶ್ರೀಲಂಕಾದ ರಾಜಕೀಯ ಪಕ್ಷಗಳು ಮತ್ತು ಮಿಲಿಟರಿ ಹೇಗೆ ನಿಭಾಯಿಸುತ್ತವೆ ಎಂಬುದು ಈಗ ಭಾರತ ಸಹಿತ ಎಲ್ಲ ದೇಶಗಳಿಗೂ ಮುಖ್ಯವಾದುದಾಗಿದೆ.

ರಾಷ್ಟ್ರಪತಿಗಳ ನಿವಾಸದಿಂದ ಪರಾರಿಯಾದ ಗೊಟಬಯ ರಾಜಪಕ್ಸೆ ಎಲ್ಲಿದ್ದಾರೆ ಎನ್ನುವುದು ಭಾನುವಾರ ಮಧ್ಯಾಹ್ನದವರೆಗೂ ತಿಳಿದು ಬಂದಿಲ್ಲ.

ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸಹ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿರುವುದರಿಂದ ರಾಜಕೀಯ ಗೊಂದಲ ಮತ್ತು ಸರಕಾರವಿಲ್ಲದ ಸ್ಥಿತಿ ದೇಶದಲ್ಲಿ ಉಂಟಾಗಿದೆ.

ಆರ್ಥಿಕ ಬಿಕ್ಕಟ್ಟು ತಾತ್ಕಾಲಿಕವಿರಬಹುದು. ಆದರೆ ಅದಕ್ಕೆ ಕಾರಣ ರಾಜಪಕ್ಷೆ ಮೇಲಿನ ಸಿಟ್ಟು ಆಗಿದೆ. ಸರಕಾರವಿಲ್ಲದ ಸ್ಥಿತಿಯಲ್ಲಿ, ಜನರು ಬೀದಿಯಲ್ಲಿ ತುಂಬಿರುವುದು ಭಾರತದ ರಾಜತಾಂತ್ರಿಕತೆಗೂ ದೊಡ್ಡ ಪೆಟ್ಟಾಗಿದೆ.

ಕಳೆದ ತಿಂಗಳು ಭಾರತದಿಂದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ನೇತೃತ್ವದ ತಂಡವು ಶ್ರೀಲಂಕಾಕ್ಕೆ ಹೋಗಿ ರಾಜಪಕ್ಸೆ ಮತ್ತು ವಿಕ್ರಮಸಿಂಘೆ ಅವರನ್ನು ಕಂಡು ಮಾತನಾಡಿ ಆರ್ಥಿಕ ಕೊಂಡಿಯನ್ನು ಬಲಪಡಿಸುವುದಾಗಿ ಆಶ್ವಾಸನೆ ನೀಡಿತ್ತು.

ಈ ಪ್ರದೇಶದ ಭದ್ರತೆ, ನೆರೆಹೊರೆಯನ್ನು ಬಲಪಡಿಸುವುದಕ್ಕಾಗಿ, ನೆರೆಹೊರೆ ಮೊದಲು ಎಂದು 350 ಕೋಟಿ ಡಾಲರ್ ನೆರವನ್ನು ಭಾರತ ಘೋಷಿಸಿದೆ.

ಶ್ರೀಲಂಕಾದ ಜನರು ಈಗ ಯಾವುದೇ ರಾಜಕೀಯ ನಾಯಕರನ್ನು ನಂಬುತ್ತಿಲ್ಲ; ಬೆಂಬಲಿಸುತ್ತಿಲ್ಲ. ಆದರೆ ಸರಕಾರವೇ ಇಲ್ಲದಿದ್ದರೆ ಅರಾಜಕತೆಯೇ ಗತಿಯಾದ್ದರಿಂದ ಈಗಿನ ಅಲ್ಲಿನ ಸಮಸ್ಯೆ ಅಷ್ಟು ಸರಳವಾದುದಲ್ಲ. ಮಧ್ಯಾವಧಿ ಚುನಾವಣೆ ನಡೆಸಬೇಕು ಎಂದರೂ ಅದಕ್ಕೆ ಒಂದು ಮಧ್ಯಂತರ ಸರಕಾರ ಬೇಕಾಗುತ್ತದೆ.

ಪ್ರಾದೇಶಿಕವಾಗಿ ಒಂದು ಪ್ರದೇಶದ ಒಂದು ದೇಶವು ದುರ್ಬಲವಾಗುವುದು ಆ ವಲಯದ ದುರ್ಬಲತೆಯನ್ನೇ ತೋರಿಸುತ್ತದೆ. ಸುಸ್ಥಿರ ಅಭಿವೃದ್ಧಿ ಎನ್ನುವುದು ಪ್ರಾದೇಶಿಕ ವಲಯದ್ದೂ ಆಗಿರಬೇಕು.

ಶ್ರೀಲಂಕಾ ಭಾರತದ ಆಸಕ್ತಿಯಾಗಿದ್ದು, ಅದಕ್ಕೆ ಹಾನಿ ಆಗದಂತೆ ಪರಿಸ್ಥಿತಿಯನ್ನು ಗಮನಿಸುವುದಾಗಿ ದಿಲ್ಲಿ ಮೂಲಗಳು ಹೇಳಿವೆ.

ರಾಜಕೀಯ ಸ್ಥಿರತೆ ಬಹಳ ಮುಖ್ಯ. ಆರ್ಥಿಕ ಸ್ಥಿರತೆ ಮರುಕಳಿಸಬೇಕೆಂದರೂ ರಾಜಕೀಯ ಸ್ಥಿರತೆ ಬೇಕೇ ಬೇಕಾಗುತ್ತದೆ.

Join Whatsapp
Exit mobile version