Home ಟಾಪ್ ಸುದ್ದಿಗಳು ರಾಹುಲ್ ಗಾಂಧಿಗೆ ಹೊಡೆಯಲು ಮೋದಿಗೇ ತಾಕತ್ತಿಲ್ಲ.. ಭರತ್ ಶೆಟ್ಟಿ ಯಾವ ಲೆಕ್ಕ: ಐವನ್ ಡಿಸೋಜಾ ಕಿಡಿ

ರಾಹುಲ್ ಗಾಂಧಿಗೆ ಹೊಡೆಯಲು ಮೋದಿಗೇ ತಾಕತ್ತಿಲ್ಲ.. ಭರತ್ ಶೆಟ್ಟಿ ಯಾವ ಲೆಕ್ಕ: ಐವನ್ ಡಿಸೋಜಾ ಕಿಡಿ

►ಭರತ್ ಶೆಟ್ಟಿ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಬಂಧಿಸಲು ಆಗ್ರಹ

ಮಂಗಳೂರು : ರಾಹುಲ್ ಗಾಂಧಿಯವರ ಕಪಾಳಕ್ಕೆ ಹೊಡೆಯಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಧ್ಯವಾಗಿಲ್ಲ, ಇನ್ನು ಭರತ್ ಶೆಟ್ಟಿಗೆ ಸಾಧ್ಯವಿದೆಯಾ ಎಂದು ವಿಧಾನಪರಿಷತ್ ಸದಸ್ಯರಾದ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಪ್ರಶ್ನಿಸಿದರು.


ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಹೊಡೆಯಲು ಮೋದಿಗೆ ತಾಕತ್ತಿಲ್ಲ, ಇನ್ನು ಭರತ್ ಶೆಟ್ಟಿ ಯಾವ ಲೆಕ್ಕ ಎಂದರು. ರಾಹುಲ್ ಗಾಂಧಿ ಮಾತಿಗೆ ಪ್ರಧಾನಿ ಮೋದಿಯವರಿಗೆ ಉತ್ತರ ಕೊಡಲು ಸಾಧ್ಯವಾಗಿಲ್ಲ, ಹಾಗಾಗಿ ಬಿಜೆಪಿಯ ಪುಡಿ ರಾಜಕಾರಣಿಗಳು ಹಾದಿಬೀದಿಯಲ್ಲಿ ಚಿಲ್ಲರೆ ರಾಜಕಾರಣ ಮಾಡಿ ಅಶಾಂತಿ ಮೂಡಿಸುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿಯನ್ನು ಭರತ್ ಶೆಟ್ಟಿ ನಾಯಿಗೆ ಹೋಲಿಸಿದ್ದಾರೆ, ನಾಯಿಗೆ ಇರುವ ಬುದ್ಧಿ ಡಾಕ್ಟರ್ ಭರತ್ ಶೆಟ್ಟಿಗೆ ಇಲ್ಲ, ನಾಯಿಗೆ ಇರುವ ಮಾನಮರ್ಯಾದಿ ಕೂಡ ಭರತ್ ಶೆಟ್ಟಿಗೆ ಇಲ್ಲ, ಭರತ್ ಶೆಟ್ಟಿ ಶಾಸಕ‌ ಸ್ಥಾನಕ್ಕೆ ಅರ್ಹನಲ್ಲ ಎಂದು ಕಿಡಿಕಾರಿದರು.


ನಾವು ಶಸ್ತ್ರಾಸ್ತ್ರ ತೆಗೆಯುತ್ತೇವೆ ಎಂದು ಭರತ್ ಶೆಟ್ಟಿ ಹೇಳಿರುವುದು ಪ್ರಚೋದನೆ ಆಗಿದ್ದು, ಭರತ್ ಶೆಟ್ಟಿ ಮೇಲೆ ಸುಮೊಟೊ ಕೇಸ್ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಮಂಗಳೂರು ನಗರ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡುವುದಾಗಿ ಹೇಳಿದರು. ಬೇರೆ ಪ್ರಕರಣದಲ್ಲಿ ಸುಮೊಟೊ ಕೇಸ್ ದಾಖಲಿಸುವ ಮಂಗಳೂರು ಪೊಲೀಸರು ಈಗ ಎಲ್ಲಿದ್ದಾರೆ ಎಂದು ಐವನ್ ಡಿಸೋಜಾ ಪ್ರಶ್ನಿಸಿದರು.
ಭರತ್ ಶೆಟ್ಟಿ ಥರದ ಬಿಜೆಪಿ ನಾಯಕರ ಪ್ರಚೋದನೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೋಮುಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಸಿಕ್ಕಿದೆ ಎಂದು ಆರೋಪಿಸಿದ ಅವರು, ಹಿಂದೂ ಧರ್ಮವನ್ನು ಯಾರೂ ಭರತ್ ಶೆಟ್ಟಿಗೆ ಗುತ್ತಿಗೆ ಕೊಟ್ಟಿಲ್ಲ, ಬಿಜೆಪಿಯವರಿಗೆ ಹಿಂದೂ ಧರ್ಮದ ಪರ ವಕಾಲತು ಮಾಡಲು ದೇಶದ ಜನರು ಅಧಿಕಾರ ಕೊಟ್ಟಿಲ್ಲ ಎಂದರು.


ಜನರ ಮಧ್ಯೆ ವಿಷಬೀಜ ಬಿತ್ತಿ ಅಧಿಕಾರ ನಡೆಸುವ ಬಿಜೆಪಿಯವರು ಮನೆಗೆ ಹೋಗುವ ಕಾಲ ಹತ್ತಿರ ಬಂದಿದೆ, ಮೋದಿ ಸರ್ಕಾರ ಇನ್ನು 6 ತಿಂಗಳಲ್ಲಿ ಪತನವಾಗಲಿದೆ ಎಂದು ಐವನ್ ಡಿಸೋಜಾ ಭವಿಷ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಜಿ ಹೆಗ್ಡೆ, ಮಾಜಿ ಮೇಯರ್ ಗಳಾದ ಎಂ ಶಶಿಧರ್ ಹೆಗ್ಡೆ, ಅಶ್ರಫ್ ಕೆ, ಹರೀನಾಥ್ ಕೆ, ಬ್ಲಾಕ್ ಅಧ್ಯಕ್ಷರು ಗಳು ಪ್ರಕಾಶ್ ಸಾಲಿಯಾನ್, ಸುರೇಂದ್ರ ಕಾಂಬ್ಳಿ, ಜೆ ಅಬ್ದುಲ್ ಸಲೀಂ, ಬೇಬಿ ಕುಂದರ್ ಅಪ್ಪಿಲತಾ, ಟಿ ಹೊನ್ನಯ್ಯ, NSUI ಜಿಲ್ಲಾಧ್ಯಕ್ಷ ಸುಹಾನ್ ಆಳ್ವಾ, ಭಾಸ್ಕರ್ ರಾವ್, ಶುಭೋದಯ ಆಳ್ವಾ ಉಪಸ್ಥಿತರಿದ್ದರು.

Join Whatsapp
Exit mobile version