ಮಂಗಳೂರು: ನಗರದ ಎಂ.ಜಿ. ರಸ್ತೆಯ ಬಳ್ಳಾಲ್ ಬಾಗ್ ನಲ್ಲಿರುವ ಓನಿಕ್ಸ್ ಪಬ್ ಮೇಲೆ ನಿನ್ನೆ ತಡರಾತ್ರಿ ಸಿಸಿಬಿ ಹಾಗೂ ಬರ್ಕೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಧ್ವನಿ ವರ್ಧಕಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ವೀಕೆಂಡ್ ಆಗಿದ್ದರಿಂದ ನಿನ್ನೆ ಸಂಜೆಯಿಂದಲೇ ಪಬ್ ನಲ್ಲಿ ಭಾರೀ ಶಬ್ದಗಳ ಧ್ವನಿ ವರ್ಧಕಗಳನ್ನು ಬಳಸಲಾಗುತ್ತಿದ್ದು, ಪಬ್ ನಿಂದ ಹೊರ ಬರುತ್ತಿರುವ ಮಂದಿ ಅಶ್ಲೀಲವಾಗಿ ವರ್ತಿಸುತ್ತಿರುವುದಾಗಿ ಸಾರ್ವಜನಿಕರು ದೂರಿದ್ದರು. ಅಲ್ಲದೇ, ವಿದ್ಯಾರ್ಥಿಗಳು, ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತಿದ್ದ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಧ್ವನಿವರ್ಧಕಗಳನ್ನು ಬಳಸಿರುವುದು ಕಂಡು ಬಂದಿದೆ.
ಪೊಲೀಸ್ ದಾಳಿಯಾಗುತ್ತಿದ್ದಂತೆ ಪಬ್ ನಲ್ಲಿ ಹಲವು ಯುವಕ-ಯುವತಿಯರು ಇದ್ದರು ಎನ್ನಲಾಗಿದೆ.
ಕೋವಿಡ್ ನಿಯಮಗಳನ್ನೂ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅಬಕಾರಿ ಕಾಯ್ದೆ, ಕೆಪಿ ಆ್ಯಕ್ಟ್ ಹಾಗೂ ಎಪಿಡೆಮಿಕ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
![](https://prasthutha.com/wp-content/uploads/2021/10/manalore-1-1024x477.jpg)
ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಬರ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ದಾಳಿಯ ನೇತೃತ್ವ ವಹಿಸಿದ್ದರು.