ಪ್ರಾಣ ಬಿಟ್ಟೇವು, ಪಿಂಚಣಿ ಬಿಡೇವು: ಒಂದು ತಿಂಗಳು ಪೂರೈಸಿದ ಮಾಧ್ಯಮಿಕ ಶಿಕ್ಷಕರ ಧರಣಿ

Prasthutha|

ಬೆಂಗಳೂರು: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ “ಪ್ರಾಣ ಬಿಟ್ಟೇವು ಪಿಂಚಣಿ ಬಿಡೇವು” ಎಂಬ ಮಾಧ್ಯಮಿಕ ಕನ್ನಡ ಅನುದಾನಿತ ಶಾಲಾ ಶಿಕ್ಷಕರ ಪ್ರತಿಭಟನೆಗೆ ಹುಬಳ್ಳಿ ಧಾರಾವಾಡ ವಿಭಾಗದ ಸಾವಿರಾರು ಮಂದಿ ಇಂದು ಆಗಮಿಸಿ ಬೆಂಬಲ ವ್ಯಕ್ತಪಡಿಸಿ ಹಳೆ ಪಿಂಚಣಿ ಪದ್ದತಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

- Advertisement -

ಸುದ್ದಿಗಾರರ ಜೊತೆ ಮಾತನಾಡಿದ ಹುಬ್ಬಳ್ಳಿ ಧಾರವಾಡ ವಿಭಾಗದ ಮಾದ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ರಾಜೇಶ್ ಕನ್ನೂರು, ಕಳೆದ ಮೂವತ್ತಾರು ದಿನಗಳಿಂದ 2006ರಿಂದ ಈಚೆಗೆ ನಿವೃತ್ತಿ ನೌಕರರಿಗೆ ಪಿಂಚಣಿ ಜಾರಿಯಾಗಿಲ್ಲ. ಬರೀಗೈಯಲ್ಲಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿವೃತ್ತಿ ಬಳಿಕ ಬಿಡಿಗಾಸು ಕೂಡ ಅವರ ಕೈಯಲ್ಲಿ ಇರುವುದಿಲ್ಲ. 1992ರ ನಂತರ ಸ್ಥಾಪನೆಯಾದ ಅನುದಾನಿತ ಶಾಲಾ ಶಿಕ್ಷಕರಿಗೆ 2007ರಲ್ಲಿ ಬಸವರಾಜ ಹೊರಟಿಯವರು ಅನುದಾನ ನೀಡಿ ನೆರವಾದರು. ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುದಾನಿತ ಮಾಧ್ಯಮಿಕ ಶಾಲಾ ಶಿಕ್ಷಕರಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಈ ಕುರಿತಂತೆ ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನೂರಾರು ಶಿಕ್ಷಕರು ಘೋಷಣೆ ಕೂಗುವ ಮೂಲಕ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

Join Whatsapp
Exit mobile version