Home ಟಾಪ್ ಸುದ್ದಿಗಳು ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದ ರಾಜಧಾನಿಯಾಗಿದೆ:  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದ ರಾಜಧಾನಿಯಾಗಿದೆ:  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮೈಸೂರು: ಭಾರತ ಐಕ್ಯತಾ ಯಾತ್ರೆಯನ್ನು ಐದು ವಿಚಾರಗಳ ಮೇಲೆ ಮಾಡಲಾಗುತ್ತಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಿ ಕುವೆಂಪು ಅವರು ಹೇಳಿದಂತೆ ಈ ನಾಡನ್ನು ಮತ್ತೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವುದು, ಯುವಕರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ನಿರುದ್ಯೋಗಿ ಯುವಕರ ರಕ್ಷಣೆ ಮಾಡುವುದು, ಬೆಲೆ ಏರಿಕೆ ಸಮಸ್ಯೆಯಿಂದ ಜನಸಾಮಾನ್ಯರ ರಕ್ಷಿಸುವುದು, ರಾಜ್ಯದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಹಾಗೂ ರೈತರು ಹಾಗೂ ಕಾರ್ಮಿಕರ ಭವಿಷ್ಯ ಭದ್ರಗೊಳಿಸುವುದು. ಇವಿಷ್ಟೂ ವಿಚಾರಗಳ ಮೇಲೆ ರಾಹುಲ್ ಗಾಂಧಿ ಅವರು ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತಾಡಿದ ಅವರು, ಬೆಲೆ ಏರಿಕೆ ಗಗನಕ್ಕೆ ಹೋಗಿದ್ದು, ನಿಮ್ಮ ಆದಾಯ ಪಾತಾಳಕ್ಕೆ ಕುಸಿದಿದೆ. ಮೋದಿಯವರು ನಿಮ್ಮ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಆದರೆ ಮಾಡಲಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದ ರಾಜಧಾನಿಯಾಗಿದೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಕೂಡ ನರಸಿಂಹರಾವ್ ಅವರಿಗೂ ಮುಂಚಿತವಾಗಿ ಪ್ರಧಾನಿಯಾಗುವ ಅವಕಾಶ ಇತ್ತು. ನಂತರ ಯುಪಿಎ ಸರ್ಕಾರದ ಅವಧಿಯಲ್ಲೂ ಅವಕಾಶ ಇತ್ತು. ಆದರೆ ಈ ದೇಶಕ್ಕೆ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಆ ಹುದ್ದೆಯನ್ನು ಮನಮೋಹನ್ ಸಿಂಗ್ ಅವರಿಗೆ ತ್ಯಾಗ ಮಾಡಿದರು.

ಬಿಜೆಪಿಯವರು ಗಾಂಧಿ ಕುಟುಂಬಕ್ಕೆ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ಅವರು ದೇಶದ ಬಲಿಷ್ಠ ನಾಯಕರು ಎಂಬ ಕಾರಣಕ್ಕೆ. ಹೆಚ್ಚು ಬಲಶಾಲಿಯಾದಷ್ಟು ಹೆಚ್ಚು ಶತ್ರುಗಳು, ಕಡಿಮೆ ಶಕ್ತಿ ಇದ್ದಷ್ಟು ಕಡಿಮೆ ಶತ್ರುಗಳು. ಶಕ್ತಿಶಾಲಿಯಾಗದಿದ್ದರೆ ಶತ್ರುಗಳೇ ಇರುವುದಿಲ್ಲ. ಹೀಗಾಗಿ ಅವರು ಎಲ್ಲಿ ಅಧಿಕಾರಕ್ಕೆ ಬರುತ್ತಾರೋ ಎಂಬ ಕಾರಣಕ್ಕೆ ಕಿರುಕುಳ ನೀಡುತ್ತಿದ್ದಾರೆ. ಅವರ ಈ ಬೆದರಿಕೆಗಳಿಗೆ ರಾಹುಲ್ ಗಾಂಧಿ ಅವರಾಗಲಿ, ಸೋನಿಯಾ ಗಾಂಧಿ ಅವರಾಗಲಿ ಹೆದರುವುದಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ನನ್ನ ಜತೆ ಮಾತನಾಡುವಾಗ ನನ್ನ ತಾತಾ 15 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು, ನನ್ನ ಅಜ್ಜಿ ಬಂದೂಕು ಗುಂಡಿಗೆ ಬಲಿಯಾದರೆ, ನನ್ನ ತಂದೆ ಮಾನವ ಬಾಂಬ್ ಗೆ ಬಲಿಯಾದರು. ನನ್ನ ತಾತ ಇಡೀ ಆಸ್ತಿಯನ್ನು ದೇಶಕ್ಕೆ ತ್ಯಾಗ ಮಾಡಿದ್ದಾರೆ. ಹೀಗಾಗಿ ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ದಾರೆ. ದೇಶಕ್ಕಾಗಿ ಬದ್ಧತೆ ಹೊಂದಿರುವ ರಾಹುಲ್ ಗಾಂಧಿ ಅವರ ಬೆನ್ನಿಗೆ ನಾವೆಲ್ಲರೂ ನಿಂತು ಈ ಯಾತ್ರೆಯಲ್ಲಿ ಹೆಜ್ಜೆ ಹಾಕಬೇಕಿದೆ. ಮೈಸೂರು ಜಿಲ್ಲೆಯವರಿಗೆ ಈ ಯಾತ್ರೆ ಒಂದು ದೊಡ್ಡ ಸೌಭಾಗ್ಯ. ಈ ಯಾತ್ರೆ ರಾಜ್ಯಕ್ಕೆ ತಮಿಳುನಾಡಿನಿಂದ ಅಥವಾ ಕೇರಳದ ಕಾಸರಗೋಡು ಮೂಲಕವಾಗಿ ರಾಜ್ಯವನ್ನು ಪ್ರವೇಶಿಸಬಹುದಿತ್ತು. ಆದರೆ ರಾಹುಲ್ ಗಾಂಧಿ ಅವರು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿನ ಪಾದಯಾತ್ರೆ ಪೈಕಿ ದೊಡ್ಡನಗರ ಮೈಸೂರು ಮಾತ್ರ ಎಂದು ಹೇಳಿದರು.

ಮೈಸೂರಿನಲ್ಲೇ 4 ವಿಧಾನಸಭಾ ಕ್ಷೇತ್ರವಿದ್ದು, ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಆರಂಭಿಸುತ್ತಾರೆ. ದಸರಾ ಹಬ್ಬದ ಪ್ರಯುಕ್ತ ಪಾದಯಾತ್ರೆಗೆ ರಜೆ ಸಿಕ್ಕಿದೆ. ಬೆಳಗ್ಗೆ ಪಾದಯಾತ್ರೆ ಮಾಡುವಾಗ ಕನಿಷ್ಠ 25 ಸಾವಿರ ಜನ ಹೆಜ್ಜೆಹಾಕುತ್ತಾರೆ. ಹೀಗಾಗಿ ನೀವು ಈ ಯಾತ್ರೆಗೆ ಜನರನ್ನು ಆಹ್ವಾನಿಸಲು ಭಿತ್ತಿಪತ್ರಗಳನ್ನು ಮುದ್ರಿಸಿ ಪ್ರತಿ ಹಳ್ಳಿಯ ಮನೆ, ಮನೆಗೆ ನೀಡಬೇಕು. ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಜನರನ್ನು ಆಹ್ವಾನಿಸಬೇಕು ಎಂದು ಕಾರ್ಯಕರ್ತರನ್ನು ಕೋರಿಕೊಂಡರು.

ನಿಮ್ಮ ನಡಿಗೆ ಈ ದೇಶಕ್ಕೆ ಕೊಡುಗೆ. ಎಲ್ಲ ಪಕ್ಷದವರು, ನಾಗರಿಕರು, ಯುವಕರು, ಮಹಿಳೆಯರು, ರೈತರಿಗೆ ಆಹ್ವಾನ ನೀಡಿ. ಈ ಪಾದಯಾತ್ರೆಯಲ್ಲಿ ಭಾಗವಹಿಸುವವರು ಆನ್ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಿ. ಇದುವರೆಗೂ 7 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ನಿರುದ್ಯೋಗಿ ಯುವಕರಿಗೆ ನೋಂದಣಿ ಅವಕಾಶ ನೀಡಲಾಗಿದೆ. ಯುವ ಧ್ವನಿ ಕಾರ್ಯಕ್ರಮದ ಅಡಿಯಲ್ಲಿ 41 ಸಾವಿರ ನಿರುದ್ಯೋಗಿ ಯುವಕರು ಹಾಗೂ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ 9 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.  ರಾಹುಲ್ ಗಾಂಧಿ ಅವರು ಪ್ರತಿನಿತ್ಯ ರೈತರು, ಯುವಕರು, ಮಹಿಳೆಯರು, ಕಾರ್ಮಿಕರು, ಬುಡಕಟ್ಟು ಜನರು ಸೇರಿದಂತೆ ಒಂದೊಂದು ವರ್ಗದ ಜನರನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ. ಈ ಅವಕಾಶವನ್ನು ನಾವು ಕಳೆದುಕೊಂಡರೆ ನಾವು ಮೂರ್ಖರಾಗುತ್ತೇವೆ. ಪ್ರತಿ ವಾರ್ಡ್ ಹಾಗೂ ಗ್ರಾಮಪಂಚಾಯ್ತಿಯಲ್ಲಿ ನಮ್ಮ ಪದಾಧಿಕಾರಿಗಳು, ಪರಾಜಿತ ಅಭ್ಯರ್ಥಿಗಳು ಜನರನ್ನು ಆಹ್ವಾನಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ಮಧುಮಾದೇಗೌಡರು ಹಾಗೂ ದಿನೇಶ್ ಗೂಳಿಗೌಡರು ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಗೆದ್ದಿದ್ದಾರೆ.   ಮಂಡ್ಯದಲ್ಲಿ 7 ಕ್ಕೆ 7 ರಲ್ಲೂ ನಮ್ಮ ಶಾಸಕರಿಲ್ಲ. ಹಾಸನ, ಚಾಮರಾಜನಗರ ಸೇರಿದಂತೆ ಹಲವು ಕಡೆಗಳಲ್ಲಿ ಎದುರಾಳಿ ಪಕ್ಷದ ಶಾಸಕರಿದ್ದರೂ, ಪದವೀಧರ ಮತದಾರರು ಹಾಗೂ ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ನೀವೆಲ್ಲರೂ ಒಟ್ಟಾಗಿ ಇವರನ್ನು ಗೆಲ್ಲಿಸಿದ್ದೀರಿ. ಇದು ಜನರಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಒಲವಿದೆ ಎಂಬುದಕ್ಕೆ ಸಾಕ್ಷಿ. ಎದುರಾಳಿ ಪಕ್ಷದ ಅಭ್ಯರ್ಥಿಗಳು ಸೋಲಿನ ಅರಿವಾಗಿ ಸ್ಪರ್ಧೆಯಿಂದ ಹಿಂದೆ ಸರಿದರು.

ಇನ್ನು ಮಹಿಳೆಯರ ವಿಚಾರವಾಗಿ ನಾ ನಾಯಕಿ ಎಂಬ ಕಾರ್ಯಕ್ರಮ ರೂಪಿಸಿದ್ದೇವೆ. ಪಾದಯಾತ್ರೆಯ ಈ ಭಾಗದಲ್ಲಿ ಪ್ರಿಯಾಂಕಾ ಗಾಂಧಿ ಅವರು ಆಗಮಿಸುವ ಸಾಧ್ಯತೆಗಳಿವೆ. ಇನ್ನೂ ಇಂತಿಮ ತೀರ್ಮಾನ ಆಗಬೇಕಿದೆ. ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪಿನವರು ಸೇರಿದಂತೆ ಎಲ್ಲ ವರ್ಗದಿಂದ ಪ್ರತಿ ಕ್ಷೇತ್ರದಿಂದ ಕನಿಷ್ಠ 1 ಸಾವಿರ ಮಹಿಳೆಯರು ಪಾದಯಾತ್ರೆಯಲ್ಲಿ ಭಾಗವಹಿಸಬೇಕು. ಆ ಮೂಲಕ ನೀವು ಶಕ್ತಿ ಪ್ರದರ್ಶನ ಮಾಡಬೇಕು. ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಿ ನಿಮ್ಮ ಧ್ವನಿಯನ್ನು ಅವರ ಜತೆ ಹಂಚಿಕೊಳ್ಳಿ ಎಂದು ತಿಳಿಸಿದರು.

ಮೈಸೂರಿನಲ್ಲಿನ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಸಂದೇಶ ಸಾರುವಂತೆ ಆಗಬೇಕು. ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆ ಮಾಡಿದಾಗ ಬಿಜೆಪಿಯವರಿಗೆ ನಡುಕ ಹುಟ್ಟಿದೆ. ನಮ್ಮ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಮುಂದೆ ಅವರ ಹರ್ ಘರ್ ತಿರಂಗಾ ಕಾರ್ಯಕ್ರಮ ಮಂಕಾಗಲಿಲ್ಲವೇ? ವಿಜಯಕ್ಕೆ ಮಾದರಿಯಾಗಿರುವ ವಿಜಯ ದಶಮಿ ಸಮಯದಲ್ಲಿ ಈ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಪ್ರತಿ ಪಂಚಾಯ್ತಿ, ಬ್ಲಾಕ್ ಮಟ್ಟದಲ್ಲಿ ಜನರನ್ನು ಕರೆಯಬೇಕು. ಬೆಳಗ್ಗೆ ಜನರನ್ನು ಕರೆತರಬೇಕು. ಈ ಭಾಗದ ಜನ ಮೇಕೆದಾಟು ಪಾದಯಾತ್ರೆಗೆ ಬಂದು ಹೆಜ್ಜೆ ಹಾಕಿದ್ದಾರೆ. ಈಗ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಪಕ್ಷಕ್ಕೆ ಕೊಡುಗೆ ನೀಡಬೇಕು. ಈ ಯಾತ್ರೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ದೂರದ ಕ್ಷೇತ್ರಗಳ ಶಾಸಕರು 5 ಸಾವಿರ ಜನರನ್ನು ಕರೆತರಬೇಕು. ಈ ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಿಂದ 15 ಸಾವಿರ ಜನರನ್ನು ಕಡ್ಡಾಯವಾಗಿ ಕರೆತರಬೇಕು. ಎಲ್ಲಿ ಛಲ, ಶ್ರಮ ಇದೆಯೋ ಅಲ್ಲಿ ಫಲ ಇದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇರುತ್ತಾನೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಶಾಸಕರು, ಪರಾಜಿತ ಅಭ್ಯರ್ಥಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಕೇವಲ ಅಧಿಕಾರಕ್ಕಾಗಿ ಮುಂದೆ ಬರುವುದಲ್ಲ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಯಾರು ಸರಿಯಾಗಿ ಜವಾಬ್ದಾರಿ ನಿಭಾಯಿಸುವುದಿಲ್ಲವೋ ಅವರಿಗೆ ಪರ್ಯಾಯವಾಗಿ ಬೇರೆಯವರನ್ನು ಬೆಳೆಸಬೇಕು ಎಂದು ಜಿಲ್ಲಾಧ್ಯಕ್ಷರಿಗೆ ಹೇಳುತ್ತೇನೆ. ನಾಯಕರಿಗೆ ಬೇಕಾದವರು ಎಂದು ಹೇಳಿಕೊಂಡು ಓಡಾಡಿದರೆ ಆಗುವುದಿಲ್ಲ. ಎಲ್ಲರೂ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕು. ಯಾವ ಊರಿನಿಂದ ಎಷ್ಟು ಬಸ್ ನಲ್ಲಿ ಎಷ್ಟು ಜನ ಬಂದಿದ್ದಾರೆ ಎಂದು ಲೆಕ್ಕ ಇಡುತ್ತೇವೆ.

ಇತ್ತೀಚೆಗೆ ರಣದೀಪ್ ಸುರ್ಜೆವಾಲ ಅವರು ಭಾರತ ಜೋಡೋ ಪಾದಯಾತ್ರೆ ಮುಕ್ತಾಯವಾದ ಬಳಿಕ ಪದಾಧಿಕಾರಿಗಳು ಶಾಸಕರ ಜವಾಬ್ದಾರಿಯನ್ನು ವಿಶ್ಲೇಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಂದು ಕೂಡ ಅವರು ಪದಾಧಿಕಾರಿಗಳು, ಶಾಸಕರ ಸಭೆ ಕರೆದಿದ್ದಾರೆ.

ನನಗೆ ನಿಮ್ಮ ಮೇಲೆ ವಿಶ್ವಾಸವಿದೆ. ಸರ್ವಜ್ಞ ಅವರು ಒಂದು ಮಾತು ಹೇಳಿದ್ದಾರೆ. ಹುಳಿಗಳಲ್ಲಿ ನಿಂಬೆ ಹುಳಿ ಶ್ರೇಷ್ಠ, ಕಪ್ಪು ಬಣ್ಮದಲ್ಲಿ ದುಂಬಿಯ ಕಪ್ಪು ಬಣ್ಣ ಶ್ರೇಷ್ಠ, ದೇವತೆಗಳಲ್ಲಿ ಶಿವನಿಗಿಂತ ಶ್ರೇಷ್ಠ ಮತ್ತೊಬ್ಬರಿಲ್ಲ. ಅದೇ ರೀತಿ ನಂಬಿಕೆಗಿಂತ ದೊಡ್ಡ ಗುಣ ಬೇರೊಂದಿಲ್ಲ ಎಂದು. ಹೀಗಾಗಿ ನಾನು ಸಿದ್ದರಾಮಯ್ಯ ಅವರು ನಿಮ್ಮನ್ನು ನಂಬಿ ಈ ಭಾಗದಲ್ಲಿ ಪಾದಯಾತ್ರೆ ನಡೆಸುತ್ತೇವೆ. ಈ ನಂಬಿಕೆ ಉಳಿಸಿಕೊಂಡು ಬಿಜೆಪಿ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ನಿಮಗೆ ಬಿಟ್ಟಿದೆ ಎಂದು ಹೇಳಿದರು.

Join Whatsapp
Exit mobile version