ಮಂಗಳೂರು: ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತಿ ಪತ್ರ ಪ್ರದರ್ಶಿಸುವ ಮೂಲಕ ಹಮ್ಮಿಕೊಂಡ ಪ್ರತಿಭಟನೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ವಿಮನ್ಸ್ ಇಂಡಿಯಾ ಮೂವ್ಮೆಂಟ್ ತಿಳಿಸಿದೆ.
ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂವಿಧಾನ ಪ್ರೇಮಿಗಳು ,ಪ್ರಜ್ಞಾವಂತ ನಾಗರಿಕರು ,ವಿಶೇಷತಃ ಮಹಿಳೆಯರು ಭಾಗವಹಿಸಿದ್ದರು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![](https://prasthutha.com/wp-content/uploads/2024/01/IMG-20240117-WA0049-1024x770.webp)
ಕಳೆದ ಡಿಸೆಂಬರ್ 24ರಂದು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ವಿರುದ್ಧ ಅವಾಚ್ಯವಾಗಿ ,ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಈತನು ಈ ರೀತಿಯಾಗಿ ಮಾತನಾಡುವುದು ಇದು ಮೊದಲ ಬಾರಿಯಲ್ಲ. ಪ್ರಭಾಕರ್ ಭಟ್ನ ಈ ಹೇಳಿಕೆಯ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯದ 21 ಕಡೆಗಳಲ್ಲಿ ಕೇಸುಗಳನ್ನು ದಾಖಲಿಸಿದೆ ಎಂದು ಅವರು ತಿಳಿಸಿದ್ದಾರೆ.
ಈತನ ಮೇಲೆ FIR ದಾಖಲಾದರೂ ಕೂಡ ಸರಕಾರೀ ವಕೀಲರು ‘ನಾವು ಆತನನ್ನು ಬಂಧಿಸುವುದಿಲ್ಲ’ ಎಂದು ಹೇಳುವ ಮೂಲಕ ಸರಕಾರ ಆತನಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸಿಗಿದೆ. ಇಷ್ಟು ಮಾತ್ರ ಅಲ್ಲ, ಈತನ ವಿರುದ್ಧ ಪ್ರತಿಭಟಿಸಲು ಭದ್ರತೆ ಕೋರಿ ಪೊಲೀಸ್ ಠಾಣೆಗೆ ತಲುಪಿದ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾ ನಾಯಕಿಯರಿಗೆ 107 ನೋಟಿಸ್ ಜಾರಿಗೊಳಿಸಿ ಅನ್ಯಾಯವೆಸಗಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಮಹಿಳಾ ಆಯೋಗ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರನ್ನು ನೀಡಿದೆ ಎಂದು ನಸ್ರಿಯ ಬೆಳ್ಳಾರೆ ತಿಳಿಸಿದ್ದಾರೆ.
ಭಟ್ ಹೇಳಿಕೆಯು ಒಟ್ಟು ಮಹಿಳಾ ಸಮಾಜವನ್ನು ಅಪಮಾನಿಸಿರುವುದರಿಂದ ಸರ್ಕಾರವು ತಾರತಮ್ಯ ನೀತಿಯನ್ನು ತೊರೆದು ಈತನನ್ನು ತಕ್ಷಣ ಜೈಲಿಗಟ್ಟಬೇಕೆಂಬುದು ವಿಮೆನ್ ಇಂಡಿಯಾ ಮೂವ್ಮೆಂಟ್ ನ ಬೇಡಿಕೆಯಾಗಿದೆ. ಇದಕ್ಕಾಗಿ ಸರ್ಕಾರವನ್ನು ಒತ್ತಾಯಿಸಿ ದಿನಾಂಕ 15/01/ 2024 ರಂದು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತಿ ಪತ್ರ ಪ್ರದರ್ಶಿಸುವ ಮೂಲಕ ಹಮ್ಮಿಕೊಂಡ ಪ್ರತಿಭಟನೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
![](https://prasthutha.com/wp-content/uploads/2024/01/IMG-20240117-WA0051-1024x575.webp)
![](https://prasthutha.com/wp-content/uploads/2024/01/IMG-20240117-WA0050-1024x768.webp)