ಹುಬ್ಬಳ್ಳಿ: ಇತ್ತೀಚೆಗೆ ಐದು ವರ್ಷದ ಬಾಲಕಿ ಹತ್ಯೆಗೈದು ಪೊಲೀಸರ ಎನ್ ಕೌಂಟರ್ ನಲ್ಲಿ ಮೃತಪಟ್ಟ ಹಂತಕ ರಿತೇಶಕುಮಾರ (35) ಪೋಟೋವನ್ನು ಅಶೋಕನಗರ ಠಾಣೆ ಪೊಲೀಸರು ಬಿಡುಗಡೆ ಮಾಡಿದ್ದು, ಕುಟುಂಬಸ್ಥರ ಪತ್ತೆಗೆ ತನಿಖೆ ಕೈಗೊಂಡಿದ್ಧಾರೆ.
ಹುಬ್ಬಳ್ಳಿಯ ಕೆಎಂಸಿಆರ್ ಐ ಶವಗಾರದಲ್ಲಿ ಇಲ್ಲಿಯವರೆಗೂ ಅನಾಥವಾಗಿರುವ ರಿತೇಶಕುಮಾರ ಶವವನ್ನು ಗುರುತಿಸಲು ಆತನ ಸಂಬಂಧಿಕರಾಗಲಿ, ಪರಿಚಯಸ್ಥರಾಗಲಿ ಯಾರೂ ಬಂದಿಲ್ಲ. ಹೀಗಾಗಿ, ಪೊಲೀಸರು ಪೋಟೋ ಸಹಿತ ಪ್ರಕಟಣೆ ಹೊರಡಿಸಿದ್ದಾರೆ.
ಆರೋಪಿ ಹೇಗಿದ್ಧ?: ಆರೋಪಿಯು ಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, 5.3 ಎತ್ತರ, ಅಗಲ ಹಣೆ ಹೊಂದಿದ್ದಾನೆ. ಅಲ್ಲದೇ, ಈತನ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ‘ಓಂ ನಮಃ ಶಿವಾಯ ಜಯ ಸಂಜಯ’ ಎಂಬ ಟ್ಯಾಟೂ ಸಹ ಇದೆ. ಈತನ ಗುರುತು ಪರಿಚಯ ಇದ್ದವರು ಕೂಡಲೇ 0836-2233490 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರೋಪಿ ರಿತೇಶ ಪೊಲೀಸ್ ವಿಚಾರಣೆ ವೇಳೆ ತಾನು ಬಿಹಾರದ ಪಾಟ್ನಾ ನಿವಾಸಿ ಎಂದು ಹೇಳಿದ್ದ. ಆದರೆ ಇಲ್ಲಿಯವರೆಗೂ ಆತನ ಮನೆಯವರಿಗೆ ಸುದ್ದಿ ತಲುಪಿಸಲು ಆಗಿಲ್ಲ. ಕುಟುಂಬಸ್ಥರನ್ನು ಪತ್ತೆಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈತನ ಫೋಟೋ ಮತ್ತು ಕೃತ್ಯದ ಬಗ್ಗೆ ಬಿಹಾರ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನೆ ಮಾಡಲಾಗಿದೆ. ಅಲ್ಲಿಂದ ಏನಾದರೂ ಸುದ್ದಿ ಬರಬಹುದು ಎಂದು ಹುಬ್ಬಳ್ಳಿ ಪೊಲೀಸರು ಕಾಯುತ್ತಿದ್ದಾರೆ.
ಇದರ ಮಧ್ಯೆ ಪೊಲೀಸರ ಮತ್ತೊಂದು ತಂಡ ಬಿಹಾರದ ಪಾಟ್ನಾಗೆ ತೆರಳಿ ಆರೋಪಿಯ ವಿಳಾಸ ಪತ್ತೆ ನಡೆಸುತ್ತಿದೆ. ಇಲ್ಲಿಯೂ ಕೂಡ ಅಶೋಕನಗರ ಠಾಣೆ ಪೊಲೀಸರು ಆರೋಪಿ ಸ್ನೇಹಿತರು, ಪರಿಚಯಸ್ಥರನ್ನು ಗುರುತಿಸಿ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಮಾಡಲಾಗುತ್ತಿದೆ.