ಬೆಂಗಳೂರಿನಲ್ಲಿ ಭಾರೀ ಮಳೆ: ಯುವತಿ ಬಲಿ

Prasthutha|

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಿಲುಕಿದ ಯುವತಿಯೊಬ್ಬರು ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ವೈಟ್ ಫೀಲ್ಡ್ ನ ಸಿದ್ದಾಪುರದಲ್ಲಿ ನಡೆದಿದೆ.

- Advertisement -


ಸಿದ್ದಾಪುರದ ಅಖಿಲಾ (23) ಮೃತ ಯುವತಿ. ಬಿಕಾಂ ಪದವೀಧರೆಯಾಗಿದ್ದ ಅಖಿಲಾ ಖಾಸಗಿ ಖಾಲೆಯೊಂದರ ಆಡಳಿತ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಮಾಡುತ್ತಿದ್ದರು.
ಎಂದಿನಂತೆ ನಿನ್ನೆ ರಾತ್ರಿ 8 ಗಂಟೆಗೆ ಕೆಲಸ ಮುಗಿಸಿಕೊಂಡು ಶಾಲೆಯಿಂದ ಹೊರಟಿದ್ದ ಅವರು ಮಳೆಯ ಕಾರಣದಿಂದಾಗಿ ಅಲ್ಲಲ್ಲಿ ವಾಹನ ನಿಲ್ಲಿಸಿ ಬರುತ್ತಿದ್ದರು. ರಾತ್ರಿ 9.30ಕ್ಕೆ ಸಿದ್ದಾಪುರ ಬಳಿ ಇರುವ ಮಯೂರ ಬೇಕರಿ ಸಮೀಪ ಬಂದಿದ್ದಾರೆ. ಈ ವೇಳೆ ಭಾರೀ ಮಳೆ ಸುರಿಯುತ್ತಿದ್ದ ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿತ್ತು. ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಬಂದ ಅಖಿಲಾ ಅವರು ಸ್ಕೂಟರ್ ನೀರು ಹೆಚ್ಚಿದ್ದರಿಂದ ಇದ್ದಕ್ಕಿದ್ದಂತೆ ಆಫ್ ಆಗಿದೆ.
ಈ ವೇಳೆ ಕೆಳಗೆ ಬೀಳುತ್ತಿದ್ದ ಅಖಿಲಾ ಸಹಾಯಕ್ಕೆ ಬಲ ಭಾಗದಲ್ಲಿದ್ದ ವಿದ್ಯುತ್ ಕಂಬ ಹಿಡಿದುಕೊಂಡಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಕೆಳಗೆ ಬಿದ್ದಿದ್ದಾರೆ.


ನಂತರ ಕೆಳಗೆ ಬಿದ್ದ ಯುವತಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಅಖಿಲಾ ಕೊನೆಯುಸಿರೆಳೆದಿದ್ದಾರೆ. ನೀರು ಹೊರ ಹೋಗಲು ಸರಿಯಾದ ವ್ಯವಸ್ಥೆ ಮಾಡದೇ, ಬೆಸ್ಕಾಂ ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಮಾಡದೇ ಇರುವುದೇ ಅಖಿಲಾ ಸಾವಿಗೆ ನೇರ ಕಾರಣ ಎಂದು ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

Join Whatsapp
Exit mobile version