ಹೈಕೋರ್ಟ್ ಉದ್ಯೋಗಿಗೆ ಹನಿಟ್ರ್ಯಾಪ್: 10 ಮಂದಿಯ ಬಂಧನ

Prasthutha|

ಬೆಂಗಳೂರು: ಹೈಕೋರ್ಟ್ ಉದ್ಯೋಗಿ ಜೈರಾಮ್ ಅವರನ್ನು ಹನಿಟ್ರ್ಯಾಪ್ ಗೆ ಸಿಲುಕಿಸಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಅನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಎರಡು ವರ್ಷದಿಂದ ಜೈರಾಮ್ ಗೆ ಪರಿಚಯವಾಗಿದ್ದ ಅನುರಾಧ, ಕಾವ್ಯಾ, ಸಿದ್ದರಾಜು ಸೇರಿ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

- Advertisement -


ಎರಡು ವರ್ಷದ ಹಿಂದೆ ಪ್ರಕರಣವೊಂದರ ಸಂಬಂಧ ಜೈರಾಮ್ ಗೆ ಅನುರಾಧಾ ಅವರ ಪರಿಚಯವಾಗಿದೆ. ಆರು ತಿಂಗಳ ಹಿಂದೆ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಟಿವಿ, ಫ್ರಿಡ್ಜ್ ಎಲ್ಲಾ ಸುಟ್ಟು ಹೋಗಿದೆ ಎಂದು ಕಷ್ಟ ಹೇಳಿಕೊಂಡು ಜೈರಾಮ್ ನಿಂದ 10 ಸಾವಿರ ಸಾಲ ಪಡೆದು ಹೋಗಿದ್ದಳು. ಈ ಹಣವನ್ನು ಅ. 10 ರಂದು ಜೈರಾಮ್ ಗೆ ಹಿಂದಿರುಗಿಸಿ ನಂತರ ಅ.25 ರಂದು 5 ಸಾವಿರ ಸಾಲ ಕೇಳಿದ್ದಳು, ಅದರಂತೆ ಅ. 30 ರಂದು ಜೈರಾಮ್ ಆಕೆಯ ಮನೆಗೆ 5 ಸಾವಿರದೊಂದಿಗೆ ಬಂದಿದ್ದಾನೆ. ಇಲ್ಲೇ ಜೈ ರಾಮ್ ಸಿಕ್ಕಿಬಿದ್ದಿದ್ದಾರೆ.
ಐದು ಸಾವಿರ ಸಾಲು ನೀಡಲು ಮನೆಗೆ ಬಂದಿದ್ದ ಜೈರಾಮ್, ಹಣ ನೀಡಿ ಹೊರಬರುತ್ತಿದ್ದಂತೆ ನಾಲ್ವರು ಬಂದು ವಾಪಸ್ ಮನೆಯೊಳಗೆ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಜೈರಾಮ್ ನನ್ನು ಥಳಿಸಿ 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಜೈರಾಮ್ ಪತ್ನಿ ಮತ್ತು ಮಕ್ಕಳಿಗೆ ಕರೆ ಮಾಡಿ ನನ್ನ ಪತ್ನಿಯನ್ನು ಅತ್ಯಾಚಾರ ಮಾಡಲು ಬಂದಿದ್ದಾಗಿ ಆರೋಪಿಯೊಬ್ಬ ಹೇಳಿದ್ದಾನೆ.


ಘಟನೆ ಬಳಿಕ ಜೈರಾಮ್ ಪೊಲೀಸ್ ಠಾಣೆಗೆ ತೆರಳಿ ತನ್ನ ಬಳಿ ಇದ್ದ ಐದು ಸಾವಿರ ರೂ ಸುಲಿಗೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಅಷ್ಟಕ್ಕೂ ಹನಿಟ್ರ್ಯಾಪ್ ಬಲೆಗೆ ಜೈರಾಮ್ ಸಿಲುಕಿದ್ದು ಹೇಗೆ? ಪೊಲೀಸರು ನಡೆಸಿದ ತನಿಖೆಯಿಂದ ಗೊತ್ತಾದ ಸತ್ಯನೇ ಬೇರೆಯಾಗಿತ್ತು.
ಸಿದ್ದ, ಅನುರಾಧ ಮತ್ತವರ ಗ್ಯಾಂಗ್ ಸುಲಭವಾಗಿ ಹಣಗಳಿಸಲು ಸಂಚು ಮಾಡಿ ಅನುರಾಧರನ್ನು ಬಳಸಿಕೊಂಡಿದ್ದರು. ಜೈರಾಮ್ ಪರಿಚಯದ ಬಳಿಕ ಆತ್ಮೀಯವಾಗಿದ್ದ ಅನುರಾಧ ಮನೆಗೆ ಬಾ ಎಂದು ಜೈರಾಮ್ ನನ್ನು ಕರೆಸಿಕೊಂಡಿದ್ದಾಳೆ. ಐದು ಸಾವಿರ ಹಣದೊಂದಿಗೆ ಬಂದಿದ್ದ ಜೈರಾಮ್, ಅನುರಾಧ ಕೈಗೆ ಐದು ಸಾವಿರ ಹಣವನ್ನು ನೀಡಿದ್ದಾನೆ. ಈ ವೇಳೆ ನಾಲ್ವರು ವೀಡಿಯೋ ಚಿತ್ರೀಕರಣ ಮಾಡಿದ್ದಾರೆ.

- Advertisement -


ನಾಲ್ವರ ಪೈಕಿ ಓರ್ವ, ನನ್ನ ಪತ್ನಿ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಿಯಾ ಎಂದು ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಮುಂದಿಟ್ಟುಕೊಂಡ ಗ್ಯಾಂಗ್ ಜೈರಾಮ್ ಬಳಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲ್ಲ ಎಂದಿದ್ದಕ್ಕೆ ಆರೋಪಿಯೊಬ್ಬ ಜೈರಾಮ್ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಘಟನೆ ನಂತರ ಜೈರಾಮ್ ಕಾಮಾಕ್ಷಿಪಾಳ್ಯ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿದ ಪೊಲೀಸರು, ಹತ್ತು ಮಂದಿಯನ್ನು ಬಂಧಿಸಿದ್ದಾರೆ.

Join Whatsapp
Exit mobile version