Home ಟಾಪ್ ಸುದ್ದಿಗಳು ಐಟಿ ಕಂಪನಿಗಳಲ್ಲಿ ಕೆಲಸದ ಆಸೆ ಹುಟ್ಟಿಸಿ ವಂಚನೆ: ಕುಖ್ಯಾತ ಕಾಳಿ ಗ್ಯಾಂಗ್ ಬಂಧನ

ಐಟಿ ಕಂಪನಿಗಳಲ್ಲಿ ಕೆಲಸದ ಆಸೆ ಹುಟ್ಟಿಸಿ ವಂಚನೆ: ಕುಖ್ಯಾತ ಕಾಳಿ ಗ್ಯಾಂಗ್ ಬಂಧನ

ಬೆಂಗಳೂರು: ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಸಂದರ್ಶನ ನಡೆಸಿ, ಐಬಿಎಂ ಕಂಪೆನಿಯ ಹೆಸರಿನ ಆಫರ್ ಲೇಟರ್ ನೀಡಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ ಪಡೆದು ವಂಚಿಸುತ್ತಿದ್ದ ಕುಖ್ಯಾತ ಕಾಳಿ ಗ್ಯಾಂಗ್ ಅನ್ನು  ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಒಡಿಶಾದ ಭುವನೇಶ್ವರದ ಕಾಳಿಪ್ರಸಾದ್ ರಾತ್ ಅಲಿಯಾಸ್ ಕಾಳಿ(38), ಪುಣೆಯ ವಾಗೋಲಿಯ ಅಭಿಜಿತ್ ಅರುಣ್ ನಟಕೆ ಅಲಿಯಾಸ್ ಅಭಿಜಿತ್ (34) ಹಾಗೂ ಒಡಿಶಾದ ಭಗಸಿಂಗ್ ಪುರದ ಅಭಿಷೇಕ್ ಮೊಹಂತಿ ಅಲಿಯಾಸ್ ಅಭಿಷೇಕ್(21)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ಆರೋಪಿಗಳು ಒಎಲ್ ಎಕ್ಸ್, ನೌಕರಿ ಡಾಟ್ ಕಮ್ ಸೇರಿದಂತೆ ಆನ್ ಲೈನ್ ಜಾಲತಾಣಗಳ ಮೂಲಕ ಐಬಿಎಂ, ಕಾಗ್ನಿಜೆಂಟ್ ಕಂಪೆನಿಗಳಲ್ಲಿ ಕೆಲಸ ಖಾಲಿಯಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ಸಂಪರ್ಕಿಸಿ ಎಂದು ಪೋಸ್ಟ್ ಹಾಕುತ್ತಿದ್ದರು.

ಈ ಪೋಸ್ಟ್ ನೋಡಿ ನಂಬುತ್ತಿದ್ದ ಕೆಲವರು ತಮ್ಮ ಪ್ರೊಫೈಲ್ ಕಳುಹಿಸುತ್ತಿದ್ದರು. ನಂತರ ಉದ್ಯೋಗಾಕಾಂಕ್ಷಿಗಳ ಫೋನ್ ನಂಬರ್ ಪಡೆದು ಆನ್ ಲೈನ್ ನಲ್ಲಿ ನಕಲಿ ಸಂದರ್ಶನ ನಡೆಸುತ್ತಿದ್ದ ಆರೋಪಿಗಳು ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಹಣ ಖರ್ಚಾಗಲಿದೆ ಎಂದು ಹೇಳಿ ಅಭ್ಯರ್ಥಿಗಳಿಂದ ಸಾವಿರಾರು ರೂಪಾಯಿ ಹಣ ಪಡೆಯುತ್ತಿದ್ದರು.

ಬಳಿಕ ಐಬಿಎಂ ಕಂಪೆನಿಯ ಹೆಸರಿನ ನಕಲಿ ಲೋಗೊ, ಆಫರ್ ಲೆಟರ್ ಸೃಷ್ಟಿಸಿ, ಅಭ್ಯರ್ಥಿಗಳಿಗೆ ಕಳುಹಿಸಿ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಐಬಿಎಂ ಕಂಪೆನಿಯ ಎಚ್.ಆರ್ (ಮಾನವ ಸಂಪನ್ಮೂಲ ಅಧಿಕಾರಿ) ಪ್ರದೀಪ್ ನನ್ನು ಸಂಪರ್ಕಿಸಿ ಎಂದು ಸುಳ್ಳು ಹೇಳಿ ಕಳುಹಿಸುವ ನಯವಂಚಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು.

ಆರೋಪಿಗಳ ಮೋಸದ ಜಾಲಕ್ಕೆ ದುಡ್ಡು ಸುರಿದ ಮುಗ್ದ ಅಭ್ಯರ್ಥಿಗಳು ಐಬಿಎಂ ಕಂಪೆನಿಗೆ ಹೋಗಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳು ಮೋಸ ಹೋಗಿರುವುದು ಗೊತ್ತಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಂಪಿಗೆಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇದುವರೆಗೂ 40ಕ್ಕಿಂತ ಹೆಚ್ಚು ಮಂದಿಗೆ ಮೋಸ ಮಾಡಿರುವುದು ಪತ್ತೆಯಾಗಿದೆ. ಅಲ್ಲದೇ, ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 8 ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿರುವುದು ಬಯಲಾಗಿದೆ.

ಆರೋಪಿಗಳ ಬಂಧನದಿಂದ ಹೆಎಚ್ಎಸ್ಆರ್ ಲೇಔಟ್, ಮಾರತ್ಹಳ್ಳಿ , ಪೂರ್ವ ಸೆನ್ ಪೊಲೀಸ್ ಠಾಣೆ,ವೈಟ್ಫೀಲ್ಡ್, ಅಲ್ಲದೆ  ಪುಣೆಯ ಹಡಪ್ ಸರ್ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದ್ದ ಪ್ರಕರಣಗಳು  ಪತ್ತೆಯಾಗಿವೆ.

ಆರೋಪಿಗಳ ವಿರುದ್ದ ಹಿಂದೆ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ ಎಂದು ಅನೂಪ್ ಶೆಟ್ಟಿ ತಿಳಿಸಿದರು.

Join Whatsapp
Exit mobile version