ಅದ್ಧೂರಿ ದಸರಾ, ಕಾಂಗ್ರೆಸ್ ಸರ್ಕಾರದ ಮತ್ತೊಂದು ಅದ್ಧೂರಿ ಹಗರಣಕ್ಕೆ ವೇದಿಕೆಯಾಗದಿರಲಿ: ಆರ್. ಅಶೋಕ್

Prasthutha|

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಬೇಕೆಂಬ ಕರ್ನಾಟಕ ಸರ್ಕಾರದ ನಡೆ ಸ್ವಾಗತಾರ್ಹ. ಆದರೆ, ಅದರಲ್ಲಿಯೂ ಅದ್ಧೂರಿ ಭ್ರಷ್ಟಾಚಾರ ಎಸಗಿ ನಾಡಿನ ಮಾನ ಹರಾಜು ಹಾಕದಿರಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಕಳೆದ ವರ್ಷ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಶ್ರೀ ಪಂಡಿತ್ ತಾರಾನಾಥ್ ಅವರ ಬಳಿಯೂ ಪರ್ಸಂಟೇಜ್ ಕಮಿಷನ್ ಕೇಳಿ ಕರ್ನಾಟಕದ ಮಾನ ಹಾರಾಜು ಹಾಕಿದ್ದ ಕಾಂಗ್ರೆಸ್ ಸರ್ಕಾರ, ಈ ವರ್ಷವಾದರೂ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿಸದೆ ನಾಡಿನ ಸಂಸ್ಕೃತಿ, ಪರಂಪರೆಯ ಗೌರವ ಉಳಿಸುತ್ತೋ ಅಥವಾ ಈ ವರ್ಷವೂ ಮತ್ತೊಂದು ಭ್ರಷ್ಟಾಚಾರದ ಅಂಬಾರಿ ಹೊತ್ತು ಕನ್ನಡಿಗರ ಮಾನ ಕಳಿಯುತ್ತೋ ಕಾದು ನೋಡಬೇಕು ಎಂದು ಅವರು ಹೇಳಿದ್ದಾರೆ.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂದರೆ ಅದು ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಇಡೀ ದೇಶವೇ, ಪ್ರಪಂಚವೇ ಎದುರು ನೋಡುವ ಇಂತಹ ಉತ್ಸವವನ್ನ ರಾಜ್ಯ ಸರ್ಕಾರ ಅತ್ಯಂತ ಆಸಕ್ತಿ, ಶ್ರದ್ಧೆ, ಭಕ್ತಿಗಳಿಂದ ಆಚರಿಸಬೇಕು. ಇಲ್ಲವಾದರೆ ಈ ಸರ್ಕಾರ ಆ ತಾಯಿ ಚಾಮುಂಡೇಶ್ವರಿಯ ಶಾಪಕ್ಕೆ ಗುರಿಯಾಗುವುದು ನಿಶ್ಚಿತ ಎಂದು ಅಶೋಕ್ ಹೇಳಿದ್ದಾರೆ.



Join Whatsapp
Exit mobile version