Home ಟಾಪ್ ಸುದ್ದಿಗಳು ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ವೈದ್ಯಕೀಯ ವೃತ್ತಿ ಅತ್ಯಂತ ಪುಣ್ಯದ ಕೆಲಸವಾಗಿದ್ದು, ಅದೃಷ್ಟವಂತರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ವೈದ್ಯರ ಸೇವೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಇಂತಹ ವೃತ್ತಿಯನ್ನು ಸಮರ್ಪಣಾ ಮನೋಭಾವದಿಂದ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರ ದಿನದ ಅಂಗವಾಗಿ ಮಾತನಾಡಿದ ಅವರು, ಹಣದಿಂದ ವೈದ್ಯರ ಸೇವೆಯನ್ನು ಅಳೆಯಲು ಸಾಧ್ಯವಿಲ್ಲ. ವೈದ್ಯರು ವೃತ್ತಿಪರರಾಗಿದ್ದಾಗ ಸಮಾಜ ಅವರನ್ನು ಗುರುತಿಸಿ ಗೌರವಿಸುತ್ತದೆ. ವೈದ್ಯರು ಕೇವಲ ಔಷಧಿ ಮಾತ್ರ ಕೊಡುವುದಿಲ್ಲ, ಬದಲಾಗಿ ರೋಗಿಯನ್ನು ಅಂತಃಕರಣದಿಂದ ಆರೈಕೆ ಮಾಡುತ್ತಾರೆ ಎಂದು ಹೇಳಿದರು.

ಶಿಕ್ಷಣ ಅನ್ನುವಂತಹದ್ದು ವೈದ್ಯರಿಗೆ ತುಂಬಾ ಅನಿವಾರ್ಯ. ಪ್ರತಿದಿನದ ಕಲಿಕೆ ಅವರಿಗೆ ಅವರಿಗೆ ತುಂಬಾ ಮಹತ್ವದ್ದು. ಹೀಗಾಗಿ ವೈದ್ಯರು ನಿರಂತರ ಅಧ್ಯಯನ ಮಾಡಿದರೆ ಮಾತ್ರ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯ. ರಾಜ್ಯದಲ್ಲಿ  ವೈದ್ಯರ ಕೊರತೆ ಇಲ್ಲ. ಆದರೆ ಇಲಾಖೆಯಲ್ಲಿ ಕೆಲ ವೈದ್ಯರಿಂದ ಹಾಜಾರಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹಾಗಾಗಿದೆ. ವೈದ್ಯರ ಮೇಲೆ ಯಾರೂ ನಿಗಾ ಇಡಬಾರದು. ವೈದ್ಯರನ್ನು ಯಾರೂ ಅನುಮಾನದಿಂದ ನೋಡಬಾರದು. ಇದರಿಂದ ವೃತ್ತಿಗೆ ಅಪಮಾನವಾಗುತ್ತದೆ. ಹೀಗಾಗಿ ಎಲ್ಲರೂ ಸಮರ್ಪಣೆ ಮಾಡಿಕೊಂಡು ವೈದ್ಯ ವೃತ್ತಿ ಮಾಡಬೇಕೆಂದು ಮನವಿ ಮಾಡಿದರು.

ಆಸ್ಪತ್ರೆಯಲ್ಲಿ ರೋಗಿಗೆ ನೀಡುವ ಚಿಕಿತ್ಸೆ ಎಷ್ಟು ಮುಖ್ಯವೋ, ಆಸ್ಪತ್ರೆಯ ನಿರ್ವಹಣೆಯೂ ಅಷ್ಟೇ ಮುಖ್ಯ. ಆಗ ಮಾತ್ರ ಆರೋಗ್ಯ ಸೇವೆಗಳಲ್ಲಿ ದಕ್ಷತೆ, ಗುಣಮಟ್ಟ, ವೃತ್ತಿಪರತೆ ಕಾಯ್ದುಕೊಳ್ಳಲು ಸಾಧ್ಯ. ವೈದ್ಯರು ಆಯುಷ್ಯವನ್ನು ವೃದ್ಧಿ ಮಾಡಲು, ನೋವನ್ನು ನಿವಾರಣೆ ಮಾಡಲು ಸಾಧ್ಯ. ಭಗವಂತ ಈ ಶಕ್ತಿಯನ್ನು ಕೇವಲ ವೈದ್ಯರಿಗೆ ಮಾತ್ರ ಕೊಟ್ಟಿದ್ದಾನೆ ಎಂದು ತಿಳಿಸಿದರು.

ಡಾ. ಬಿ.ಸಿ.ರಾಯ್ ಜನ್ಮಶತಮಾನೋತ್ಸವದ ಅಂಗವಾಗಿ ಇಡೀ ದೇಶದಲ್ಲಿ ವೈದ್ಯರ ದಿನಾಚರಣೆ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡ ಅರ್ಥಪೂರ್ಣ ಆಚರಣೆಗೆ ಸಿದ್ಧವಾಗಿದೆ. ಜುಲೈ 7 ರಂದು ವಿಧಾನ ಸೌಧದ ಬಾಂಕ್ವೆಟ್ ಹಾಲ್ ನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ  ವಿಶೇಷ ಹಾಗೂ ಗಣನೀಯ ಸೇವೆ ಮಾಡಿದವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟ ಇದ್ದಾಗ ವೃತ್ತಿಪರತೆ ಹಾಗೂ ಕಾರ್ಯಕ್ಷಮತೆ ಹೆಚ್ಚುತ್ತದೆ. ವೈದ್ಯರು ಸಮಾಜದ ಪ್ರೀತಿ ಮತ್ತು ನಂಬಿಕೆ ಗಳಿಸಿಕೊಂಡಾಗ ಸಾಧನೆಯ ತೃಪ್ತಿ ಸಿಗುತ್ತದೆ ಎಂದು ಹೇಳಿದರು.

ಎಲ್ಲಾ ವೈದ್ಯರು ಆಡಳಿತದಲ್ಲಿ ಪರಿಣಿತಿ ಪಡೆಯಬೇಕು. ಅದಕ್ಕಾಗಿ ಡಾಕ್ಟರ್ಸ್ ಹೆಲ್ತ್ ಕೇರ್ ಮ್ಯಾನೇಜ್ಮೆಂಟ್ ಆರಂಭಿಸಿದ್ದೇವೆ. ಹೆಲ್ತ್ ವರ್ಕರ್ಸ್ ಕೂಡ ವೃತ್ತಿಪರವಾಗಿ ಬೆಳೆಯಬೇಕು. ವೈದ್ಯಕೀಯ ಲೋಕದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಿವೆ. ಹೊಸ ಸವಾಲುಗಳು ಎದುರಾಗುತ್ತಿವೆ. ಕೋವಿಡ್ ಬಂದ ಮೇಲೆ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಯಿತು. ಹಿಂದೆ ಇದ್ದ ಸೌಲಭ್ಯ ಏನೇನು ಅಲ್ಲ. ಆದರೆ ಕೋವಿಡ್ ಬಳಿಕ 10 ವರ್ಷದಲ್ಲಿನ ಆಗುವಂತಹ ಬೆಳವಣಿಗೆ ಒಂದು ವರ್ಷದಲ್ಲಿ ಆಗಿದೆ. 2020ಕ್ಕೆ ಹೋಲಿಸಿದರೆ ಈಗ 4000 ವೈದ್ಯರು ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರ ವೈದ್ಯರ ನೇಮಕಾತಿ ಹಾಗೂ ಮೂಲಭೂತ ಸೌಕರ್ಯ, ಸೌಲಭ್ಯಗನ್ನು ಹೆಚ್ಚು ಮಾಡುತ್ತಿದೆ. ಆಸ್ಪತ್ರೆಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಆರಂಭವಾಗಬೇಕು. ಆದರೆ ಅದಕ್ಕೂ ಮೊದಲು ಗುಣಮಟ್ಟದಲ್ಲಿ ಬದಲಾವಣೆ ತರಬೇಕು. ವೈದ್ಯರ ಮೇಲೆ ಯಾರೇ ಹಲ್ಲೆ ಮಾಡಿದರೂ ಅದು ಅಕ್ಷಮ್ಯ ಅಪರಾಧ. ವೈದ್ಯರ ಮೇಲೆ ಹಲ್ಲೆ ಮಾಡಿದರೆ ಕಾನೂನು ಕ್ರಮ ಕೂಗೊಳ್ಳುತ್ತೇವೆ ಎಂದು ತಿಳಿಸಿದರು.

 ವೈದ್ಯರ ಬೇಡಿಕೆಯನ್ನು ಇಲಾಖೆ ಹಂತಹಂತವಾಗಿ ಪರಿಗಣಿಸಲಿದೆ.  ಸರ್ಕಾರ ವೈದ್ಯರಿಗೆ ವಿಶೇಷ ಸ್ಥಾನಮಾನ ನೀಡಿದೆ.  ವೈದ್ಯಕೀಯ ಕ್ಷೇತ್ರದಲ್ಲಿ ತಾಂತ್ರಿಕತೆಯನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಸರ್ಕಾರ್ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಮಾಸ್ಕ್ ಧರಿಸಿ:

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಮಾಸ್ಕ್ ಧರಿಸಬೇಕು. ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಬೇಕು ಎಂದು ಸಚಿವರು ತಿಳಿಸಿದರು.

Join Whatsapp
Exit mobile version