Home Uncategorized ಖಾಯಂ ಪಿಡಿಒ ನೇಮಕಕ್ಕೆ ಒತ್ತಾಯಿಸಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯತ್ ಮುಂದೆ ಸಿಪಿಐಎಂ ಪ್ರತಿಭಟನೆ

ಖಾಯಂ ಪಿಡಿಒ ನೇಮಕಕ್ಕೆ ಒತ್ತಾಯಿಸಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯತ್ ಮುಂದೆ ಸಿಪಿಐಎಂ ಪ್ರತಿಭಟನೆ

ಕೊಡಗು : ಕಳೆದ ಹಲವು ವರ್ಷಗಳಿಂದ ಖಾಯಂ ಪಿಡಿಒ ನೇಮಕವಾಗದೆ ಈ ಭಾಗದ ಸಂತ್ರಸ್ತರು, ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಿದ್ದು ಕೂಡಲೇ ಖಾಯಂ ಪಿಡಿಒ ಹಾಗೂ ಇತರೆ 3ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಸಿಪಿಐಎಂ ಶಾಖಾ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.


ಪಂಚಾಯಿತಿಗೆ ಅಧಿಕಾರಿಗಳನ್ನು ನೇಮಕ ಮಾಡದ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಸಿಪಿಐಎಂ ಶಾಖಾ ಕಾರ್ಯದರ್ಶಿ ಪಿ. ಆರ್ ಭರತ್ ಮಾತನಾಡಿ ನೆಲ್ಲಿಹುದಿಕೇರಿಯ ಗ್ರೇಡ್ 1 ಗ್ರಾಮ ಪಂಚಾಯಿತಿಯಾಗಿದ್ದು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ.ಶೇ 80ರಷ್ಟು ಬಹುಸಂಖ್ಯಾತರು ಹಾಗೂ ಕೂಲಿಕಾರ್ಮಿಕರೇ ಹೆಚ್ಚಾಗಿರುವ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಮೂಲಸೌಕರ್ಯ ಸಮಸ್ಯೆ ಬಗೆಹರಿಯದೆ ಉಳಿದಿದೆ.

ಈ ಹಿಂದಿನಿಂದಲೂ ಹಲವು ಬಾರಿ ತಾತ್ಕಾಲಿಕ ಪಿಡಿಒಗಳನ್ನು ನೇಮಕ ಮಾಡಲಾಗುತ್ತಿದ್ದು ಖಾಯಂ ಪಿಡಿಒ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ. ಈ ಹಿಂದೆ ಇದ್ದ ಪಿಡಿಒ ವಾಲ್ನೂರು ಪಂಚಾಯಿತಿಯಲ್ಲೂ ಸೇವೆ ಸಲ್ಲಿಸುತ್ತಿದ್ದು ಇದೀಗ ಅಧಿಕಾರಿಗಳನ್ನ ಹುಡುಕಿ ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.


ಕಳೆದ 3ವರ್ಷಗಳಿಂದಲೂ ಖಾಯಂ ಪಿಡಿಒ ನೇಮಕವಾಗದೆ ಹಲವಾರು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಇದರೊಂದಿಗೆ ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕರ ಹುದ್ದೆಗಳು ಖಾಲಿ ಇದ್ದು ಕೂಡಲೇ ಖಾಲಿ ಇರುವ 3ಹುದ್ದೆಗಳನ್ನು ಕಾಯಂ ಆಗಿ ಬಗೆಹರಿಸಿ ಕೊಡಬೇಕೆಂದು ಒತ್ತಾಯಿಸಿರುವ ಅವರು ತಪ್ಪಿದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.


ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಸಂದರ್ಭ ಮನವಿ ಸ್ವೀಕರಿಸಲು ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಇಲ್ಲದೆ ಇರುವುದರಿಂದ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪಂಚಾಯಿತಿ ಸಿಬ್ಬಂದಿಗಳಿಗೆ ಮನವಿ ಪತ್ರ ಸಲ್ಲಿಸಿ ಮೇಲಾಧಿಕಾರಿಗಳಿಗೆ ಕಳಿಸುವಂತೆ ಮನವಿ ಮಾಡಿದರು.


ಪ್ರತಿಭಟನೆ ಸಂದರ್ಭ ಸಿಪಿಐಎಂ ಪಕ್ಷದ ಪ್ರಮುಖರಾದ ಎಂ ಜಿ ಜೋಸ್, ರವಿ, ಮೋಣಪ್ಪ, ಚಂದ್ರನ್,ಯೂಸುಫ್, ಮಣಿ, ರೀನಾ, ರಮ್ಯಾ, ಲೀಲಾ, ಸೌಕತ್, ಮುಸ್ತಫಾ, ಶಿವರಾಮ್, ರಾಜನ್ ಸೇರಿದಂತೆ ಮತ್ತಿತರರಿದ್ದರು.

Join Whatsapp
Exit mobile version