Home ಕರಾವಳಿ ಮಂಗಳೂರು: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ | ಪ್ರತಿಕೃತಿ ದಹಿಸಿ ಆಕ್ರೋಶ

ಮಂಗಳೂರು: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ | ಪ್ರತಿಕೃತಿ ದಹಿಸಿ ಆಕ್ರೋಶ

ಮಂಗಳೂರು : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೊರತಾಗಿಯೂ ಮಾಜಿ ಸಚಿವ ಈಶ್ವರಪ್ಪ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಗರದ ಕ್ಲಾಕ್ ಟವರ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಡಾ. ಜಿ ಪರಮೇಶ್ವರ ಮಾತನಾಡಿ, ಪ್ರಧಾನಿಯಿಂದ ಹಿಡಿದು ರಾಜ್ಯ ಸರ್ಕಾರದವರೆಗೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡಬೇಡಿ . ಜನರು ನಿಮ್ಮನ್ನು ಕ್ಷಮಿಸಲ್ಲ. ಇವತ್ತಲ್ಲ ನಾಳೆ ಆಚೆಗೆ ಹಾಕುತ್ತಾರೆ . ಬಿಜೆಪಿ ಸರಕಾರದ 40% ವಿಚಾರ ಸಂತೋಷ್ ಪಾಟೀಲ್ ಸಾವಿನಿಂದ ಎಲ್ಲರಿಗೂ ಗೊತ್ತಾಗಿದೆ . ಆದರೆ ಸಂತೋಷ್ ಪಾಟೀಲ್ ತನಗೆ ಯಾರೆಂದೇ ಗೊತ್ತಿಲ್ಲ ಎಂದು ಹೇಳುವ ಈಶ್ವರಪ್ಪನವರಿಗೆ ಗೊತ್ತಿಲ್ಲದ ಕೋಟಿ ರೂ . ಕಾಮಗಾರಿ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.  ಭ್ರಷ್ಟಾಚಾರದ ವಿಚಾರ ತನಿಖೆಯಾಗಲಿ , ಇಡೀ ಸರಕಾರದ ಮೇಲೆಯೇ ತನಿಖೆಯಾಗಲಿ , ಸರಕಾರವನ್ನು ಬರ್ಖಾಸ್ತು ಮಾಡಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಕಾಂಗ್ರೆಸ್‌ ಮನವಿ ಮಾಡಿದೆ” ಎಂದು ಹೇಳಿದರು .

ಪ್ರತಿಭಟನೆಯಲ್ಲಿ ಈಶ್ವರಪ್ಪನವರ ಪ್ರತಿಕೃತಿಗೆ ಕೈಕೋಳ ಹಾಕಿ ಥಳಿಸಲಾಯಿತು . ಅಲ್ಲದೆ ಪ್ರತಿಕೃತಿಯನ್ನು ಬೆಂಕಿಹಚ್ಚಿ ಸುಡಲಾಯಿತು . ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಐವನ್ ಡಿಸೋಜಾ, ಯುಟಿ ಖಾದರ್, ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಶಾಹುಲ್ ಹಮೀದ್. ಶಾಲೆಟ್ ಪಿಂಟೋ, ಶುಭೋದಯ ಆಳ್ವ, ಶಕುಂತಲಾ ಶೆಟ್ಟಿ, ಅಪ್ಪಿ, ಸುಹೈಲ್ ಕಂದಕ್, ಪ್ರಕಾಶ್ ಸಾಲ್ಯಾನ್, ಸುಹಾನ್ ಆಳ್ವ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು

Join Whatsapp
Exit mobile version