ಭಾರತದ ಆಟಗಾರರಿಗೆ ಸ್ನಾನ ಮಾಡಲು ಷರತ್ತು ವಿಧಿಸಿದ ಬಿಸಿಸಿಐ

Prasthutha|

ಹರಾರೆ: ಏಕದಿನ ಸರಣಿಯನ್ನಾಡಲು ಜಿಂಬಾಬ್ವೆಗೆ ತೆರಳಿರುವ ಟೀಮ್‌ ಇಂಡಿಯಾ ಆಟಗಾರರಿಗೆ ಬಿಸಿಸಿಐ ವಿಶೇಷ ಸೂಚನೆಯೊಂದನ್ನು ನೀಡಿದೆ. ಜಿಂಬಾಬ್ವೆಯ ರಾಜಧಾನಿ ಹರಾರೆ ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದೆ. ಅಲ್ಲಿನ ಬಹುತೇಕ ಭಾಗಗಳಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಇದನ್ನು ಮನಗಂಡಿರುವ ಬಿಸಿಸಿಐ, ನೀರನ್ನು ಅನಾವಶ್ಯಕವಾಗಿ ಪೋಲು ಮಾಡದಂತೆ ತನ್ನ ಆಟಗಾರರಿಗೆ ನಿರ್ದೇಶನ ನೀಡಿದೆ. ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ಸ್ನಾನ ಮಾಡಿಸಿ ಮುಗಿಸಬೇಕು. ನೀರನ್ನು ವ್ಯರ್ಥಗೊಳಿಸಬೇಡಿ ಎಂದು ಹೇಳಿದೆ. ತಂಡದ ಆಟಗಾರರ “ಸ್ವಿಮ್ಮಿಂಗ್ ಫೂಲ್‌’ನ ಅವಧಿಯನ್ನೂ ಕಡಿತಗೊಳಿಸಲಾಗಿದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಸಾಮಾನ್ಯವಾಗಿ ಆಟಗಾರರು ಒತ್ತಡದ ಸಂದರ್ಭಗಳಲ್ಲಿ ಮತ್ತು ವಿಕೆಟ್‌ ಒಪ್ಪಿಸಿದ ನಿರಾಶೆಯಲ್ಲಿ ಶವರ್ ಕೆಳಗೆ ನಿಂತುಕೊಳ್ಳುವ ಹವ್ಯಾಸ ರೂಡಿಸಿಕೊಂಡಿರುತ್ತಾರೆ. ಹೀಗಾಗಿ ಅನಿವಾರ್ಯತೆಯಿದ್ದಾಗ ಮಾತ್ರ ಆಟಗಾರರು ಸ್ನಾನ ಮಾಡುವಂತೆ ಬಿಸಿಸಿಐ ಸೂಚಿಸಿದೆ.

ಭಾರತ ಕ್ರಿಕೆಟ್‌ ತಂಡದ ಆಟಗಾರರು ವಿದೇಶಿ ಪ್ರವಾಸದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್‌ ಇಂಡಿಯಾ ಇದೇ ರೀತಿಯ ಸಮಸ್ಯೆ ಎದುರಿಸಿತ್ತು. ಕೇಪ್‌ಟೌನ್ ನ ಹಲವು ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾದಾಗ, ಆಗಲೂ ಬಿಸಿಸಿಐ ನೀರನ್ನು ಮಿತವಾಗಿ ಬಳಸುವಂತೆ ಆಟಗಾರರಿಗೆ ಸೂಚಿಸಿತ್ತು. ಇದೀಗ ಹರಾರೆಯಲ್ಲೂ ನೀರಿನ ಸಮಸ್ಯೆಯು ತೀವ್ರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಬಿಸಿಸಿಐ ಆಟಗಾರರಲ್ಲಿ ಮನವಿ ಮಾಡಿದೆ.

- Advertisement -

ಭಾರತ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿ ಆಗಸ್ಟ್ 18 ರಿಂದ ಆರಂಭವಾಗಲಿದ್ದು, ಎರಡನೇ ಪಂದ್ಯ ಆಗಸ್ಟ್ 20ರಂದು ನಡೆಯಲಿದೆ. ಮೂರನೇ ಏಕದಿನ ಪಂದ್ಯ ಆಗಸ್ಟ್ 22 ರಂದು ನಡೆಯಲಿದೆ. ಈ ಮೂರು ಪಂದ್ಯಗಳು ಹರಾರೆಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹೀಗಾಗಿ ಒಂದು ವಾರಗಳ ಕಾಲ ಸ್ನಾನದ ವೇಳೆ ನೀರು ಪೋಲಾಗುವುದನ್ನು ತಡೆಯಲು ಆಟಗಾರರಿಗೆ ಬಿಸಿಸಿಐ ಸೂಚಿಸಿದೆ.

Join Whatsapp
Exit mobile version