Home ಟಾಪ್ ಸುದ್ದಿಗಳು ಬಂಟ್ವಾಳ: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಬಂಟ್ವಾಳ: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂ ನಲ್ಲಿ ಈಜಲು ಹೋಗಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಬಿ.ಸಿ. ರೋಡ್ ಪರ್ಲ್ಯ ನಿವಾಸಿ ಝುನೈದ್ ಎಂಬವರ ಪುತ್ರ ಸಲ್ಮಾನ್ ಫಾರಿಸ್ (16) ಮೃತಪಟ್ಟ ವಿದ್ಯಾರ್ಥಿ. ಈತ ಬಿ.ಸಿ.ರೋಡ್ ನ ಬೆಸ್ಟ್ ಹೈಸ್ಕೂಲ್ ನಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದನು.


ಶುಕ್ರವಾರ ಜುಮಾ ನಮಾಝ್ ನ ಬಳಿಕ ಸಲ್ಮಾನ್ ಹಾಗೂ ಆತನ ಮೂವರು ಸ್ನೇಹಿತರು ಬಂಟ್ವಾಳ ಬಂಟರ ಭವನದ ಹಿಂಭಾಗದಲ್ಲಿರುವ ವೆಂಟೆಡ್ ಡ್ಯಾಮ್ ನಲ್ಲಿ ಈಜಾಡಲು ತೆರಳಿದ್ದಾರೆ. ನೀರಿನ ಆಳ ಅರಿಯದೆ ಸಲ್ಮಾನ್ ನೀರಿಗಿಳಿದಿದ್ದು, ನೋಡ ನೋಡುತ್ತಿದ್ದಂತೆ ಮುಳುಗಿದ್ದಾನೆ. ಇದರಿಂದ ಗಾಬರಿಗೊಂಡ ಆತನ ಸ್ನೇಹಿತರು ಓಡಿ ಹೋಗಿ ಇತರರಿಗೆ ವಿಷಯ ತಿಳಿಸಿದ್ದಾರೆ. ದೂರದಲ್ಲಿ ಬಟ್ಟೆ ಒಗೆಯುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳಕ್ಕೆ ಧಾವಿಸಿ ಸಲ್ಮಾನ್’ನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಝು ನೈದ್ ಅವರ ನಾಲ್ವರು ಮಕ್ಕಳ ಪೈಕಿ ಸಲ್ಮಾನ್ ಮೂರನೇಯನಾಗಿದ್ದು, ಓದು, ಕ್ರೀಡೆಯಲ್ಲೂ ಮುಂಚೂಣಿಯಲ್ಲಿದ್ದನು ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ.

Join Whatsapp
Exit mobile version