ಶಸ್ತ್ರಾಸ್ತ್ರ ತರಬೇತಿ ಆರೋಪ: ದೂರು ದಾಖಲಿಸಿದ PFI

Prasthutha|

ಮಡಿಕೇರಿ: ಬಜರಂಗದಳದ ಕಾರ್ಯಕರ್ತರಿಗೆ ನಿರ್ಜನ ಪ್ರದೇಶವೊಂದರಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂದು ಆರೋಪಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಸಂಬಂಧ ಶಾಸಕರೂ ಸೇರಿದಂತೆ ಶಿಬಿರದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿದಂತೆ PFI ಕಾರ್ಯಕರ್ತ ಕೆ.ಎಚ್.ಇಬ್ರಾಹಿಂ ಎಂಬವರು ಪೊನ್ನಂಪೇಟೆ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ. ಕೊಡಗು ಶಾಂತಿ, ಸಹಬಾಳ್ವೆಗೆ ಹೆಸರಾದ ಜಿಲ್ಲೆಯಾಗಿದ್ದು, ಈ ಆತಂಕಕಾರಿ ತರಬೇತಿ ಶಿಬಿರದಿಂದ ಭವಿಷ್ಯದಲ್ಲಿ ಜಿಲ್ಲೆಯನ್ನು ಕೇಸರಿ ಭಯೋತ್ಪಾದನೆಯ ತಾಣವಾಗಿಸಲು ಹೊರಟಂತಿದೆ. ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸೇರಿ 120 ಮಂದಿ ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶಿಬಿರದ ಆಯೋಜಕರು ಹಾಗೂ ಉತ್ತೇಜನ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೇ 5ರಿಂದ 13ರ ತನಕ ಸಾಯಿ ಶಂಕರ ಶಾಲೆಯಲ್ಲಿ ನಡೆದ ಪ್ರಶಿಕ್ಷಣ ವರ್ಗದಲ್ಲಿ ಆರ್ಎಸ್ಎಸ್, ಭಜರಂಗದಳ, ವಿಎಚ್ಪಿ ಕಾರ್ಯಕರ್ತರಿಗೆ ಬಂದೂಕು ತರಬೇತಿ, ತ್ರಿಶೂಲ ವಿತರಣೆ ಮಾಡಿರುವ ಮಾಹಿತಿ ಬಂದಿದೆ. ವಿ.ಎಚ್.ಪಿ ಜಿಲ್ಲಾ ಅಧ್ಯಕ್ಷ ಪಿ.ಕೃಷ್ಣಮೂರ್ತಿ, ರಘು ಸಕಲೇಶಪುರ ಹಾಗೂ ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಝರು ಗಣಪತಿ ಶಿಬಿರ ಆಯೋಜಿಸಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -


ಈ ನಡುವೆ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಗೆ ವೀರಾಜಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಅವರು ಭೇಟಿ ನೀಡಿ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಭಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಹಾಗೂ ನಿರ್ಜನ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿದ್ದರು. ‘ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಾಲಾ ಆವರಣ ನೀಡುವಂತೆ ಭಜರಂಗದಳದ ಮುಖಂಡರು ಮನವಿ ಮಾಡಿದ್ದರು. ಅದರಂತೆ ಶಾಲೆ ಆವರಣ ಬಿಟ್ಟು ಕೊಡಲಾಗಿತ್ತು. ಅಷ್ಟು ಮಾಹಿತಿ ಮಾತ್ರ ನಮ್ಮಲ್ಲಿದೆ. ಶಾಲೆಯ ಶಿಕ್ಷಕರಾಗಲಿ, ಆಡಳಿತ ಮಂಡಳಿ ಸದಸ್ಯರಾಗಲಿ ಶಿಬಿರದಲ್ಲಿ ಭಾಗಿಯಾಗಿಲ್ಲ ಎಂದು ಆಡಳಿತ ಮಂಡಳಿ ಸದಸ್ಯರು ಶಿಕ್ಷಣಾಧಿಕಾರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.


ಪೊನ್ನಂಪೇಟೆಯಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರ ತರಬೇತಿ ನಡೆದಿಲ್ಲ. ಶಾಲೆಯಿಂದ ಅನುಮತಿ ಪಡೆದು ವಿಹೆಚ್ಪಿ ಮತ್ತು ಭಜರಂಗದಳದ ಕಾರ್ಯಕರ್ತರಿಗೆ ಶಿಬಿರ ನಡೆಸಲಾಗಿದೆ. ಏರ್ಗನ್ ತರಬೇತಿ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಏರ್ಗನ್ ಖರೀದಿಸಲು ಮತ್ತು ಉಪಯೋಗಿಸಲು ಯಾವುದೇ ಅನುಮತಿ ಬೇಡ. ಆದರೂ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಮತ್ತೊಮ್ಮೆ ಕಾಯ್ದೆ ಬಗ್ಗೆ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version